About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Saturday, October 27, 2012

ಉಳಿದೆಲ್ಲ ಮಾಯೆ..

ಮಾಧವನ ನಾದಕೆ
ಮುಂಗುರುಳ ಬಾಚದೇ
ಉಟ್ಟ ಬಟ್ಟೆಯ ತೊಟ್ಟು
ಹೊರಟಳಾ ಗೋಪಿಕೆ..

ಅಮ್ಮನಾ ನೆನಪಿಲ್ಲ
ಅಪ್ಪನಿಗೆ ಹೇಳಿಲ್ಲ
ಏನೊಂದು ತಿಳಿದಿಲ್ಲ
ಗೋಪಾಲನೊರತು..

ಮುಳ್ಳ ಮೊನಚಿಗೆ ಸಿಲುಕಿ
ಪಲ್ಲು ಸಿಗಿದರು ಕೂಡ
ಮೈ ನಿಲ್ಲಲಾರದು
ಮುಸುಕಿದಾ ಮಾಯೆಗೆ..

ಮುದ್ದು ಹರಿಣವು ಬೇಡ
ತುಂತುರಿನ ಮುದ ಬೇಡ
ಗೋವಿಂದನಂದಕ್ಕೆ
ಎಲ್ಲವೂ ಅಡ್ಡಿ..

ಆರ್ಭಟದ ವರುಣನೂ
ಸೋತು ಕಂಗಾಲಾಗಿ
ಹರಿದಿದ್ದ ಕಾಲ್ಕೆಳಗೆ
ತಿಳಿನೀರ ಥರದಲ್ಲಿ..

ನಿಂತ ಕೆರೆಯಲಿ ತೇಲಿ
ಹರಿವ ನದಿಯಲಿ ಹರಿದು
ಬಂದಳು ಹುಡುಕುತ್ತ
ಕೊಳಲಿನುಸಿರ..

ಅರೆರೆ..?!

ಶ್ಯಾಮನ ಸುಳಿವಿಲ್ಲ
ಎಲ್ಲಿ ಹೋದನೊ ಕಳ್ಳ
ದಿಕ್ಕು ದಿಕ್ಕಲಿ ಅಲೆದು
ಮರುಗಿದಳು ಕನ್ನಿಕೆ..

ಮೋಹನನ ರಾಗಕ್ಕೆ
ಮರಗಳಲು ಬೆವರಿತ್ತು
ಉಳಿದಿತ್ತು ಛಾಯೆ
ಉಳಿದೆಲ್ಲ ಮಾಯೆ..!

Friday, October 26, 2012

ಇನ್ನೊಂದಿಷ್ಟು ಹಾಯ್ಕುಗಳು:

ನನ್ನ ಕಣ್ಮುಂದೆಯೇ ಹುಡುಗನಿಗೆ
ತುಂಬುಯೌವನೆಯಿಂದ ಕಪಾಳಮೋಕ್ಷ.
"ಕಣ್ಣಾರೆ ಕಂಡರೂ ಮುಟ್ಟಿ ನೋಡು"
ಎಂಬ ಗಾದೆ ಅವನೇ ಬರೆದಿದ್ದು..!

ಮಧುರ ಕಂಠದ ಹಾಡುಹಕ್ಕಿಗೆ
ತನ್ನ ಶೈಲಿ ಬೇಜಾರಾಗಿ
ಒಮ್ಮೆ ಕರ್ಕಶವಾಗಿ ಕೂಗಿತು.
ನಂತರದಲ್ಲಿ ಅದು 'ಕಾಗೆ'ಯಂತಲೇ ಮನೆಮಾತಾಯಿತು..!

ಹುಡುಗಿಗೆ ಹುಡುಗ ಸಿಕ್ಕ.
ಮರಿಹಕ್ಕಿಗೆ ರೆಕ್ಕೆ ಸಿಕ್ಕಿತು.
ಉಳಿದಿದ್ದು ತಾಯ್ತಂದೆಯರ
ಖಾಲಿ ಮನ-ಮನೆಗಳು ಮಾತ್ರ.

ಗಾಂಧಿಯಂದ "ಕೆಟ್ಟದ್ದನ್ನು ಮಾಡಬೇಡ".
ಅದನ್ನು ಓದಿದ ಕೂಸು
"ಕೆಟ್ಟದ್ದು" ಪದಕ್ಕೆ ಅರ್ಥ ತಿಳಿಯಲು ಹೋಗಿ
ಸಿಗರೇಟು ಕಲಿಯಿತು..!

ಗೋಡೆಗೆ ಆತ ಹೊಡೆದ ಮೊಳೆಗೆ
ಮರುದಿನ ಕುಂಕುಮದಿಂದ ಕಂಗೊಳಿಸುತ್ತಿದ್ದ
ಅವನ ಭಾವಚಿತ್ರವೇ ನೇತುಬಿದ್ದಿದ್ದು
ದುರಂತವಲ್ಲದೇ ಇನ್ನೇನು..?!

Thursday, October 25, 2012

ಗರ್ಭಾಂತಃಕರಣ

ಅಮ್ಮ..
ಮೊದಲ ಕೀಟಲೆಗೆ
ಅಟ್ಟಿಸಿ ಹೊಡೆದವಳು ನೀನು,
ನಂತರವೂ..!

ತಿಳುವಳಿಕೆಯ ಮೊದಲುಗಳಲ್ಲಿ
ಅಂಡಿನ ಬಾಸುಂಡೆಗಳಿಗತ್ತು
ನಿನ್ನ ಗಂಡನ ಕೇಳಿದ್ದೆ ನಾನು..
ನಾ ನಿಮಗೇ ಹುಟ್ಟಿದ್ದಾ?
ತಂದು ಸಾಕಿದ್ದಾ?
ಮುದ್ದು ಸುರಿಯುವ ಅತ್ತೆಯೇ ನನ್ನಮ್ಮನಾ?!

ಉತ್ತರ ದಕ್ಕಿದ್ದು
ನಿನ್ನ-ನನ್ನಲ್ಲೊಂದಷ್ಟು ಸಾಮ್ಯತೆಗಳಲ್ಲಿ.
ಪಾರ್ಲರಿಲ್ಲದ ಕಾಲ ನಿನ್ನದು
ಇಬ್ಬರ ಹುಬ್ಬೂ ಪೊದೆಪೊದೆ.
ಗಜಗಮನೆಯಲ್ಲ,ಗುಬ್ಬಿಯೂ ಅಲ್ಲ ನೀನು,
ನನ್ನಂತೆ.
ಸ್ನೇಹಿತನೆಂದ ನೆನಪು..
ಜಡೆಹಾಕಿದರೆ ಥೇಟ್ ನಿನ್ನಮ್ಮನೇ ನೀನು..!

ರೂಮಿನ ಮಂದತೆಯಲ್ಲಿ
ಪೋಲಿಪುಸ್ತಕದೊಂದಿಗೆ ಸಿಕ್ಕಿಬಿದ್ದಾಗ
ಒಂದಿಂಚೂ ಬೈಯ್ಯಲಿಲ್ಲ ನೀನು..!
"ಯಾರಿದನ್ನು ಕೊಟ್ಟವ?" ಮತ್ತು
ಹಿತ್ತಲ ಹರಿವಲ್ಲಿ
ಹರಿದು ಬಿಸಾಕಿದ್ದಷ್ಟೇ.

ಅಜ್ಜಿಯೊಟ್ಟಿಗಿನ ನಿನ್ನ ಜಗಳ
ಯಾವತ್ತಿಗಿದ್ದಿದ್ದೂ ಶೀತಲವೇ.
ಆದರೂ
ಮಾತೆ-ರತಿಯರ ಮಧ್ಯೆಯ
ಅಪ್ಪನ ಸಮಭಾವದ ಹೆಣಗಾಟ
ನಂಗೆ ಮಾತ್ರ ಗೊತ್ತಿತ್ತು,ಗೊತ್ತಾ..?

ಕಾಲದ ಸವಕಳಿ ಬಹುಬೇಗ ಸಂದಿತು.
ವೀರ್ಯ,ಗಾಂಭೀರ್ಯತೆಗಳರ್ಥ ತಿಳಿಯಿತು.
ಓದಿಗೆಂದು ಮನೆಯಿಂದ
ಹೊರಬಿದ್ದಿದ್ದೂ ಆಯಿತು.
ಆಗ,ಆಗಲೇ ಗೊತ್ತಾಗಿದ್ದು ನಿನ್ನತಿಮುಗ್ಧ ಪ್ರೀತಿ.

ಅಲ್ಲಿಂದಿಲ್ಲಿಗೂ ಅದು ಜಾರಿಯಲ್ಲಿದೆ.
ದಿನಕ್ಕಾರುಸಲದ ಫೋನು,
"ಹೊಟ್ಟೆಬಾಕ ನೀನು,
ಎರಡು ಚಪಾತಿ ಯಾವ ಮೂಲೆಗೋ?"
ಎನ್ನುವ ವಾತ್ಸಲ್ಯ,
"ಅರ್ಜೆಂಟಿಗಿಟ್ಟುಕ್ಕೋ,ಅಪ್ಪನಿಗೆ ತಿಳಿಸಬೇಡ"ವೆಂದು
ಕೊಡುವ ಸಾವಿರದ ನೋಟು..

ಅಮ್ಮನಮೇಲಿನ ಕಥೆ,ಕವನಗಳ
ತಿರುವುಗಳಲ್ಲಿ "ನನ್ನಮ್ಮನ್ಯಾಕೆ ಹೀಗಿಲ್ಲ?"
ಎಂದುಕೊಳ್ಳುತ್ತಿದ್ದವನಿಗೆ
ಸಾತ್ವಿಕ ಉತ್ತರ ನಿನ್ನಿಂದಲೇ ಸಿಗುತ್ತಿದೆ ನನಗೆ.
"ಹಾಗಿದ್ದೆ ನಾನು,ಈಗಲೂ,
ಕುರುಡುಕಣ್ಣು ನಿನ್ನದು".

ಇಷ್ಟಾಗುವಷ್ಟರಲ್ಲಿ
ನಿನ್ನ ಬೆನ್ನಲ್ಲೊಂದು ಛಳಕು.
ಯಾವ ಕ್ಷಣದಲ್ಲೂ ನೀನು ಕಾಲು
ಕಳೆದುಕೊಳ್ಳಬಹುದೆಂಬ
ಡಾಕ್ಟರಿನ ಉದ್ಗಾರ..
ಬೇವರ್ಸಿ ಬದುಕಿನ ಆಟ ಇಲ್ಯಾಕೆ ಶುರುವಾಯಿತಮ್ಮಾ?

ಹಾಗಾಗಕೂಡದು.

ಕೈಗೊಂದು ಕೋಲನ್ನು ನಾನೇ ಕೊಡುತ್ತೇನೆ.
ತಪ್ಪಿದ್ದರೂ,ಇಲ್ಲದಿದ್ದರೂ
ಪ್ರತಿದಿನ ಅಟ್ಟಿಸಿ,ಓಡಾಡಿಸಿ ಹೊಡಿ ನನ್ನ :
ದೈವಕ್ಕೂ ಬಿಟ್ಟುಕೊಡೆನು ನಾ ನಿನ್ನ.
ಮುಕ್ಕೋಟಿದೇವರು ಕಾಲಡ್ಡ ಕೊಟ್ಟರೂ
ನಿನ್ನ ಕಾಲ್ಗಳ ಓಟ
ನನ್ನ ಮುಪ್ಪಿನತನಕ ನಿಲ್ಲದಿರಲಿ.
ನನ್ನೆಡೆಗಿನ ನಿನ್ನ
ಜ್ವಲಂತ ಪ್ರೀತಿ ಜ್ವಲಿಸುತ್ತಲೇ ಇರಲಿ.

Tuesday, October 23, 2012

ನಿಲ್ಲದಿದು ಕಾಲ..

ಗಡಿಯಾರದ ಮಡಿಲಲ್ಲಿ
ಮುಳ್ಳಿಡುವ ಮುಂಚೆ
ಒಮ್ಮೆಯೂ ಯೋಚಿಸಿರಲಿಲ್ಲವೇ ಇಟ್ಟವನು? :
ತನ್ನ ತಾರುಣ್ಯದ ಕೊಲೆ
ಅಲ್ಲಿಂದಲೇ ಎಂದು?

ದೊಡ್ಡವನಾಗಬಾರದಿತ್ತು ನಾನು..
ಅಕ್ಕನ ಮರಳುಗೂಡು ಪಕ್ಕದಲ್ಲೇ ಇರುತ್ತಿತ್ತು,
ಮೂರೊತ್ತು ಸಂಧ್ಯಾವಂದನೆಯ
ಕಷ್ಟವಿರುತ್ತಿರಲಿಲ್ಲ,
ನನ್ನವೇ ಕಣ್ಣುಗಳಿಗೆ
ಕುಡಿತದ ಕೆಂಪಂಟುತ್ತಿರಲಿಲ್ಲ..

ಕಾಲಚಕ್ರ "ಚಕ್ರ"ವೇ ಯಾಕಾಗಬೇಕಿತ್ತು?
ತಿರುಗದ,ಓಡದ
ಚೌಕವಾಗಿದ್ದಿದ್ದರೆ
ಅದರಲ್ಯಾವ ಮೂಲೆಗುಂಪಾದರೂ
ನನಗಡ್ಡಿಯಿರುತ್ತಿರಲಿಲ್ಲ..

'ವೇಳೆ'ಯ ಬೇಳೆ ಬೇಯಬಾರದಾಗಿತ್ತು..
ಅಪ್ಪನಪ್ಪುಗೆಯಲ್ಲಿ ಮುಪ್ಪಿನ ಘಮವಿರುತ್ತಿರಲಿಲ್ಲ,
ಹೊತ್ತಿಗೆ ಸರಿಯಾಗಿ ಮಲಗಿರುತ್ತಿದ್ದೆ,
ಹತ್ತೊಂಭತ್ತರ ಮಗ್ಗಿಯ
ವೇದನೆಯಿರುತ್ತಿರಲಿಲ್ಲ.!,
ಅಜ್ಜಿಯ ಸುಖಾಸುಮ್ಮನೆಯ ಕೆಮ್ಮಿಗೆ
ತಲೆತಟ್ಟಲು ಅಜ್ಜನಿರುತ್ತಿದ್ದ..

ಸಮಯಕ್ಯಾರು ಅಂಟಿಸಿದ್ದು ಈ 24/7..?
'ಸುವರ್ಣ'ಕ್ಕೊಂದೇ ಸಾಕಿತ್ತು..!
ಕ್ಷಣಕ್ಷಣಕ್ಕೂ
ಕ್ಷಣಗಳುರುಳುವಿಕೆ,
ಮೊಗ್ಗುಗಳರಳುವಿಕೆ,
ಪಕ್ಕದ ಪಕಳೆ ಬಾಡುವಿಕೆ..
ಮೂಡಿ-ಮಡಿಯುವುದೊಂದು
ಚಟವೇ ಇವಕ್ಕೆ?

ಯಾರೆಷ್ಟು ಬೊಬ್ಬಿರಿದರೂ,
ಹಜಾರೆಯೇ ಲಂಚವಿಕ್ಕಿದರೂ
ನಿಲ್ಲದಿದು ಕಾಲ..!
ಮೋಹಿನೀ 'ನಾಳೆ'ಗಳ ಭರಕ್ಕೆ ಬರವುಂಟೇ?
ಭೂರಮೆಯ ರವಿಯಾಸೆ ಕೊನೆಗೊಳ್ಳದ್ದು,
ಆಸೆಗಳ ತುರಿಕೆ ತಡೆಯಿಲ್ಲದ್ದು,
ಹೊಟ್ಟೆಯ ಆಕಳಿಕೆಗೆ
ಅನ್ನದ ಚಿಟಿಕೆ,ಹೊಡೆದು ಮುಗಿಯದ್ದು..

ಎಲ್ಲಿಯತನಕ?
ಪಾಪ ತುಳುಕುವತನಕ?
ಮೊಲೆಹಾಲು ಬತ್ತುವತನಕ?
ಅತಿಯಾಸೆಗೆ ಕೈ ರೇಖೆಗಳು
ನೇರವಾಗುವತನಕ..?!
ಎಲ್ಲೆಮೀರಿ
ಎಲ್ಲ ಮುಗಿಯುವತನಕ?

ದೇವರೊಮ್ಮೆ ಕೊನೆಯ ರುಜು ಹಾಕಲೇಬೇಕು..
ಅಷ್ಟರೊಳಗೆ
ಸುಖಾಸುಮ್ಮನೆಯ ಕೆಮ್ಮಿಗೆ
ತಲೆತಟ್ಟಲು
ನನ್ನಜ್ಜಿಗೊಂದು ಮರಿಮಗಳು ಸಿಕ್ಕಿಬಿಡಬೇಕು..!!

Wednesday, October 17, 2012

ಇದೇ ಬದುಕು ಬೇಕಿದೆ.

ಹೆಪ್ಪುಗಟ್ಟಿ ಅಂಡೂರಿ ಕುಂತಿದ್ದ
ಹತ್ತಾಸೆಗಳಿಗೆ
ಮತ್ತೆ ಹರಿವು ಸಿಕ್ಕಿದೆ..
ಕುಲಾವಿ ಹೊಲಿಯುವ ಕ್ಷಣಕ್ಕೆ ಕಾದಿರುವ
ಗಂಡು ಬಾಣಂತಿ ನಾನು..

ಪಣಕ್ಕಿಟ್ಟ ಒಂಭತ್ತು ಮಾಸಗಳು
ಬೇಡದ ನೈವೇದ್ಯವಾಗಲಿಲ್ಲ,
ನಾನೇ ಗೀಚಿ,ನಟಿಸಿ,ನಿರ್ದೇಶಿಸಿ,ನಡೆಸಿದ
ನಾಟಕಕ್ಕೆ
ನಾನೇ
ಪ್ರೇಕ್ಷಕ ಪ್ರಭುವೂ ಆಗಿದ್ದೆ..!

ಬೀಡಾಡಿ ಕುನ್ನಿಗಳಂತಿದ್ದ
ಕೆಲ ಕೆಟ್ಟಕನಸುಗಳು
ತುಂಡುಬಾಲ ಮುದುರಿ
ಇಂದು ತೆಪ್ಪಗಾಗಿವೆ.
ಸೋನೆಯಲ್ಲ ಇದು..
ದಪ್ಪ ಹನಿಗಳ ಕುಂಭದ್ರೋಣವೆಂದು
ಅವಕ್ಕೂ ಗೊತ್ತಾಗಿದೆ..

ಅದುರುವ ಆಸೆಗಳ ಬುನಾದಿಗೆ
ಎರಡಿಂಚು ಮರಳು ಜಾಸ್ತಿ ಬಿದ್ದಿದೆ.
ಆದರೂ..
ಭವಿತದ ಕಳಶ ಸ್ಥಾಪನೆಯ ಸೆಳೆತ
ಶೀಘ್ರಸ್ಖಲನವಾಗಬಾರದಲ್ಲ..!

ಹಾಗಾಗಿ..

ಬಿಕ್ಕಿದ್ದು,ಬಿಕ್ಕಲಿರುವುದ ಕೊಡವಿ
'ಇಂದು' ಮಾತ್ರ ನಂದೆಂದು
ಇವತ್ತಿನ ನನ್ನತನವನ್ನಪ್ಪಬೇಕಿದೆ
ಹರಿವಿನೊಂದಿಗೆ ನುಗ್ಗಬೇಕಿದೆ,
ಕ್ಷಣಗಳಲ್ಲಿ ಬದುಕಬೇಕಿದೆ,
ಇದೇ ಬದುಕು ಬೇಕಿದೆ.

ಮರೆತೆ..

ಗಾಂಧಿಬಜಾರಿನಿಂದ
ಕುಲಾವಿಗೊಂದು ಸೂಜಿ ತರಬೇಕಿದೆ..!

Saturday, October 13, 2012

ಚಾವಡಿಯ ಬೆಳಕಲ್ಲಿ..

ಚಾವಡಿಯ ಬೆಳಕಲ್ಲಿ
ಉಸಿರು ತೊಯ್ದಾಕ್ಷಣಕೆ
ಬಿಸುಟ ಆ ಚಾದರ,
ಕಳಕೊಂಡ ಚಾವಿಗಳೇ ಕುರುಹಾಗಲಿ..

ಚಿಗುರು ಮೀಸೆಯ ಭಯಕೆ
ಆತುರದಿ ಇಳಿದಿಳಿದ
ಕುಂಕುಮದ ಕೆಂಪುಹನಿ
ತುಟಿಪಕ್ಕದ ಮಚ್ಚೆಯ ಮರೆಮಾಚಲಿ..

ಸೀಳೊಡೆದೆರಡೆದೆ ಮೇಲೆ
ಮಗುವಾಗಿ ನಿದ್ರಿಸುವ
ನಿಷ್ಕಾಮ ಭಾವಗಳು
ಒಪ್ಪೊತ್ತು ಮುಗಿದಾಗ ಮರೆಯದೇ ಬರಲಿ..!

ಪದೆಪದೆಯ ಸರಿತಕ್ಕೆ
ಮುತ್ತುಗಳ ಕೆನೆತಕ್ಕೆ
ಒಂಚೂರು ನಕ್ಕು,ಒಂಚೂರು ನಾಚಿ
ನುಣುನಡುವನಪ್ಪಿದಾ ಕಟಿಬಂಧ ನೆಲಸೇರಲಿ..

ಅಸ್ತ್ರಗಳ ಅಭ್ಯಾಸ
ಕೊನೆಘಳಿಗೆಯಲ್ಲಲ್ಲ.
ಗಾದೆ ನಂಬುವ ಮುನ್ನ
ಮೇಲ್ಬರೆದ ಚರಣಗಳ ನೀ ಓದಲಿ..!

ಅಂತ್ಯದಾಡಂಬರಕೆ
ಚಂದ್ರರಾ ದಿಬ್ಬಣಕೆ
ಬಿಂಬಗಳ ಜೊತೆ ಯಾಕೆ
ಬಣ್ಣವಿಲ್ಲದ ಕನ್ನಡಿ ಕಣ್ಮುಚ್ಚಲಿ..
ತಪ್ಪಿ ಕಣ್ತೆರೆದರೂ ಕ್ಷಮೆ ಕೇಳಲಿ..!

ಓ ಬಿಸುಟ ಚಾದರವೆ
ನಿಷ್ಕಾಮ ಭಾವಗಳೆ
ನಸುಕು ಹರಿಯಿತು ಕೇಳಿ
'ಕೇಳಿ' ಮುಗಿಯಿತು ಏಳಿ
ಮೈಗಳಿಗೆ ಮುಸುಕಾಗಿ ಮೇಲೇರಿ ಬನ್ನಿ,
ಕನಸನೂ ತನ್ನಿ..!

Wednesday, October 10, 2012

ನಿದ್ರಾಪರ್ವ..

ಮನದಣಿಯೆ ಮಲಗಿ ಮಲಗಿ,
ಗುರಿಯ ಕನಸು ಬಿದ್ದೂ ಬಿದ್ದೂ
ಕೊನೆಗೊಮ್ಮೆ ಖಾಲಿಯಾಗಿದೆ..
ಸಹಸ್ರ ಮೈಥುನಗಳ ನಂತರದ ವೀರ್ಯದಂತೆ..!

ಕಟ್ಟಳೆಯಿಲ್ಲದ ತಿಂಗಳುಗಟ್ಟಲೆಯ ನಿದ್ದೆಯಿದು.
ಗೊರಕೆಯ ಸದ್ದಿಗೆಚ್ಚರವಾಗಿ "ಥೂ ಹಲ್ಕಟ್" ಎನ್ನಲು
ಪಕ್ಕದಲ್ಯಾರೂ ಇಲ್ಲ.
ದುರುಳ ದುರ್ಯೋಧನನಿಲ್ಲದ
ಜುಳು ಜುಳು ವೈಶಂಪಾಯನ ನಾನು..!

ಒಮ್ಮೊಮ್ಮೆ "ಥಟ್ ಅಂತ ಏಳಿ"
ಎನ್ನುವಂತೆ ಎದ್ದುಬಿಡುತ್ತಿದ್ದ ನೆನಪು..
ಮೂರರ ಜಾವ..
ಬ್ರಾಹ್ಮಿಯಲ್ಲ.. ಮದ್ಯಾಹ್ನ..!
ಗೂಡುಕಟ್ಟಿ ಮುಗಿದ ಗೀಜಗನ ನಿರಾಳತೆಗೆ
ಹಾವಿನ ಭಯದಂತೆಯಾ??
ಗೊತ್ತಿಲ್ಲ.

ನಿದ್ದೆಯಲ್ಲೆದ್ದು ಹೊಂಟವನಿಗೆ
ದಾರಿಗುಂಟ ಕುಂಟೆ-ಕಾವಲಿಗಳು ಅಡ್ಡ ಸಿಗಲು
ನನ್ನದೇನು ಬಂಗ್ಲೆಯೇ..?!
ಕದ ತೆರೆಯುತ್ತಿದ್ದಂತೆ ಮುಗಿದುಹೋಗುವ
ಬಡ ಅರಮನೆಯದು..!

ಅರೆ..!! ಅಶರೀರವಾಣಿ..!
"ಒಮ್ಮೆ ಎಚ್ಚರವಾಗು.. ದಾರಿ ಸಿಗುವುದು.."

ಎಚ್ಚರವಾಗಲಿಲ್ಲ..
ದೊಡ್ಡದಾಗಿ ಆಕಳಿಸಿ ಮತ್ತೆ ಮಲಗಿದೆ..
ಮುನ್ನೂರೈನೂರು ಹೊತ್ತುಗಳನ್ನು
ಮುಗ್ಗಲು ಹಿಡಿದ ಚಾದರದಡಿ
ಮಗ್ಗಲು ಬದಲಿಸುತ್ತಾ ಕಳೆದೆ..

ಇಂಥದೊಂದು ಸಕ್ಕರೆ ನಿದ್ದೆಯ ಮಧ್ಯದಲ್ಲಿ..

ಗೊತ್ತಿಲ್ಲದೇ ಸುಷುಪ್ತಿಯ ಪಿತ್ಥದಲ್ಲಿ
ಬಡಬಡಿಸಿದ್ದು..
"ಇದ್ಯಾ ಬುದ್ಧಿ ಬೇಕು" ಎಂಬಂತೆ
ಕೇಳಿರಬಹುದಾ..?!
ಕನಸಲ್ಲಿ ಜಗನ್ಮಾತೆ ಬಂದು
ನಾಲಿಗೆ ಎಳೆದು
ಹೊನ್ನ ತ್ರಿಶೂಲದ ಚೂಪಿನಲ್ಲಿ
"ಓಂ" ಬರೆದಳು..!!

ತಕ್ಷಣ ಧಿಗ್ಗನೆದ್ದು
ಕನ್ನಡಿಯೆದುರು "ಆ" ಮಾಡಿದೆ..
ಬಿಳಿನೊರೆ ತುಂಬಿದ ಕೆಂಪು ತೊಗಲು,
ಹಿಂದೊಂದು
ತೊಟ್ಟಿಕ್ಕುವ ಹನಿಯ ರೂಪದ
ಕಿರುನಾಲಿಗೆ..!
ಅಷ್ಟೇ..

ಅದೇ ಬೇಜಾರಿಗೆ
ಈ ಕವಿತೆ ಬರೆದೆ..

Wednesday, April 18, 2012

ಇನ್ನಷ್ಟು ಹಾಯ್ಕುಗಳು:

ರಾತ್ರಿ ಮಲಗುವಾಗ ಕೊಟ್ಟಕೊನೆಯ ನೋಟದಲ್ಲಿ
ದೇವರನ್ನೇ ನೋಡಿ ಮಲಗಬೇಕೆಂದುಕೊಂಡರೂ
ದೇವರ ಫೋಟೋ ನೋಡಿಯಾದಮೇಲೆ
ಲೈಟ್ ಆಫ್ ಮಾಡುವ ಸ್ವಿಚ್ಚನ್ನು ಕಣ್ತುಂಬಿಕೊಂಡು ಮಲಗೋದು ಗಮನಿಸದ ಸತ್ಯವಷ್ಟೇ..!

ಸಕ್ಕತ್ ಫಿಗರೊಬ್ಬಳ ಪಕ್ಕ ಇದ್ದ
ಅವಳ ಗೆಳತಿ ಸಾಧಾರಣ ಸೌಂದರ್ಯವಂತೆಗೆ ಲೈನ್ ಹೊಡೆದೆ.
ಕೊನೆಗೂ 'ಕಲೆ'ಗೆ ಬೆಲೆ ಬಂತು..!

ಜೇಡ ಬೇಡಿದ್ದು ಇಬ್ಬನಿ.
ಬಂದಿದ್ದು ಬಿರುಮಳೆ.
ಪರಿಣಾಮ..
ಜೊಲ್ಲು ಬರಿದಾಗಿ ಮೂಡಿದ ಹೊಸಮನೆ..!

ನಿಧಿ ಆಸೆಯಿಂದ ಹೊಲ ಅಗೆದಿದ್ದಕ್ಕೆ
ಪಕ ಪಕ ಅಣಕಿಸಿದ ಎರೆಹುಳುವಿಗೆ
ಕಣ್ಣುಬೇನೆಯಾಗಿದ್ದು
ಚಿನ್ನದ ಬೆಳೆ ಬಂದಾಗ..!

ಧಗಧಗಿಸುತ್ತಿದ್ದ ಸುಸ್ತಿನ ಕಾಮಕ್ಕೆ
ಕೊನೆಗೂ ಸಿಕ್ಕಿದ್ದು
ನಿದ್ದೆಯೆಂಬ ಮಹಾ ಮೈಥುನ..!

ಉಗುರು ತೆಗೆಯಲು ಮರೆತ ಅವನ ಆ ಚಿಕ್ಕತಪ್ಪು..
ಗಿನ್ನಿಸ್ ಪುಸ್ತಕದ ಸಾಲಿನಲ್ಲಿ
ಅಳಿಸಿಹೋಗೇಬಿಟ್ಟಿತಲ್ಲ.. ವಾಹ್..!

ಚಿಗರೆಗೂ ಚುಕ್ಕಿ ಇದೆ,
ಚಿರತೆಗೂ ಚುಕ್ಕಿ ಇದೆ..
"ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು"
ಎಂಬ ಗಾದೆಯ ಅರ್ಥ ಇದೇ..!

Thursday, April 5, 2012

ತಾಂತ್ರಿಕ ಸ್ವಗತ

ಬೆಳ್ಳಂಬಿಳುಪಿನ ಹಿಮಾಲಯದೊಂದು
ಗೊತ್ತಿಲ್ಲದ ಗವಿಯೊಳಗಿದ್ದೇನೆ.
ಕೆಳಗೆ ಚರ್ಮ ತಾಟು
ಮುಂದೆ ತಾಳೀಸೌಟು.......

ಹೆಸರಿನರ್ಧಭಾಗ "ಬಾಬಾ"..!
ತಾಂತ್ರಿಕ ಪಥದ
ವಿಕಾಸವಾದವಾ..?!
ಗೊತ್ತಿಲ್ಲ.

ಜೀವದಾಯಿನಿ ಗಂಗೆ
ಹೆಣಗಳಿಗೆ ಜೀವ ಕೊಟ್ಟೇನೆಂದರೂ
ನಾನು ಬಿಟ್ಟೇನಾ?
ಅವು ನನ್ನ ಪಾಲಿನವು.
ಜಲದೊಳಗಿಂದ ಕಾಲೆಳೆತಂದು
ಭಸ್ಮ ತೀಡಿ ಶಿವನಪ್ಪಣೆಯ
ಶವಭಕ್ಷಣೆ ನಡೆಸಿದ್ದೆ..

ತಂತ್ರಾರಾಧಕರ ಪ್ರಕೃತೀ ಶಕ್ತಿ ಹೆಣ್ಣಿನ
ಭಾವಾರ್ದ್ರತೆಗಳಿಗೆ
ಕುಮ್ಮಕ್ಕು,ಕಿಮ್ಮತ್ತುಗಳಿಲ್ಲ ಇಲ್ಲಿ.
ತಂತ್ರಸಂಭೋಗದ ಹೆಣ್ಣುನಯನಗಳಲ್ಲಿ
ತುಂಬಿ ಒಣಗಿದ
ಉಪ್ಪನ್ನು ಗಮನಿಸಿದ್ದೇನೆ.
ಗಮನಿಸಿದ್ದೇನೆ ಅಷ್ಟೇ..

ಬಲಿಕೊಟ್ಟ ಕಾಡುಕೋಣಗಳ
ಕಿರುಚಿನಲ್ಲಿ ಕಾಳಿಯ ರೌದ್ರತೆಯ ಕಂಡಿದ್ದೇನೆ.
ಚಿತ್ತಾರ ಮಂಡಲದ ಸಮ್ಮೋಹಿನೀ ಬಣ್ಣಗಳು
ಸಮಾಧಿಸ್ಥಿತಿಗೊಯ್ದಿವೆ..
ಶವಗಳ ಜೊತೆಗಿನ ಮೌನ ಸಂವಾದಗಳು
ಅರಿಯದ ಜಗತ್ತುಗಳ ಪರಿಚಯಿಸಿವೆ.

ಇವತ್ತಿಗೆ ನನಗೆ ಇನ್ನೂರು ತುಂಬಿತು..!

ಕಳೆದೆರಡು ಶತಮಾನಗಳ ಸಾಧನೆ
ಮೈ ಕಸುವ ಕಳೆದಿಲ್ಲ,ಸುಕ್ಕು ತಂದಿಲ್ಲ.
ಗಾಳಿಯಲ್ಲೀಗಲೂ ತೇಲಿನಿಲ್ಲಬಲ್ಲೆ,
ಕೆಂಪುಗುಲಾಬಿಯ ಬಣ್ಣ ಬದಲಿಸಬಲ್ಲೆ,
ದೃಷ್ಠಿ ಮಾತ್ರಕ್ಕೆ ಜೀವದ ಬೂದಿ ಬಸಿಯಬಲ್ಲೆ..!

ಆದರೆ..

ಶತಮಾನಗಳ ಸುಭಿಕ್ಷ ಏಕಾಂತ ಸಾಕಾಗಿದೆ.
ಶಿಷ್ಯ ಶಿಷ್ಯರನ್ನಿಟ್ಟುಕೊಳ್ಳಲಾಗದು.
ಬಾಡದ ಬದುಕಿನಲ್ಲಿ ಘಮವೇ ಇಲ್ಲ.
ಭೋಲೇನಾಥನ ಸಂಗದಿಂದ ಕಡೆಯಲಾಗದ
ಕಾರ್ಗಲ್ಲಾಗಿಬಿಟ್ಟಿದ್ದೇನೆ.

ಒಂದಿನವೂ ಕಷ್ಟವೆನಿಸದ ಬದುಕು
ಕೈಗಿತ್ತಿದ್ದು ಸಾವಿರ,
ಕಾಡಿದ್ದು ನೂರು,
ಕಂಡಿದ್ದು ಹತ್ತು,
ದಕ್ಕಿದ್ದು ಒಂದೇ..
"ನೆಮ್ಮದಿರಹಿತ ಪ್ರಾಣ".

ಗೊತ್ತಿಲ್ಲದೀ ಗವಿಯಲ್ಲಿ
ಸಹಸ್ರಾರದ ಬ್ರಹ್ಮರಂಧ್ರ
ಅದೇ ಪ್ರಾಣಕ್ಕೆ ಕಾದು ಕುಳಿತಿದೆ..
ಮೋಕ್ಷದ ಮೋಹಕ ದಾರಿ
'ಇಚ್ಛಾಮರಣ'ಕ್ಕೆ, ಮುಂದಿರುವ
ತಾಳೀಸೌಟಿನ ಇನ್ನೊಂದು ಅರ್ಘ್ಯ ಸಾಕು...
ಇನ್ನೊಂದೇ ಅರ್ಘ್ಯ ಸಾಕು..
ಸಾಕು.

ಓಂ ಬಂ ಕ್ಲೀಂ ಹ್ರೀಂ ಚಾಮುಂಡಾಯೈ ವಿಚ್ಛೈ................

Monday, April 2, 2012

ಕಲಹಕಾಂಡ

ಪಾಂಡವರ ವಧುದಕ್ಷಿಣೆ
ಭರ್ಜರಿ ಬ್ರಾಂಡುಗಳ ಐದು ಮೊಬೈಲುಗಳು..!
ಒಂಟಿಹೆಣ್ಣು ದ್ರೌಪದಮ್ಮನಿಗೆ ಕೈಗಳೆರಡೇ..
ನುಣುನಡುವಿಗೇರಿಸಿದ
ಸಂಚಿಯೊಳಗಿಳಿಬಿಟ್ಟಳಾ ಸೆಲ್ಲುಗಳ..!

ಹಸ್ತಿನಾವತಿಯ ವಿಹಾರವಾಯುವಿನಲ್ಲಿ
ಬಿಸಿವಿರಹದ ಸುಡು ಸುಡು..
ಒಬ್ಬರಿಗೊಬ್ಬರಿಗೆ ತಿಳಿಯದಂತೆ ಸೇರಬೇಕಾಗಿದೆ..!!
ವಾಕಿಂಗಿನ ಪಾಂಚಾಲಿಯಲ್ಲಿದ್ದಷ್ಟೂ ಫೋನುಗಳಿಗೆ
ಲೊಚಲೊಚನೆ ಬಂದವೈದು ಮೆಸೇಜುಗಳು...!

ಪರಮ ಪತಿಯಂದಿರವ್ರತೆಯಲ್ಲವೇ ಈಕೆ..!
ಚರಮದ ಬೇಗೆಯಲ್ಲಿ ಮೊದಲೆತ್ತಿದ್ದು
ಭೋಪರಾಕ್ ಧರ್ಮಜನ ಮೆಸೇಜು..
"ಅಪ್ರಿಯವಾದರೂ ಸತ್ಯವನ್ನೇ ಹೇಳುತ್ತೇನೆ..
ನಿನ್ನ ಇವತ್ತಿನ ಕೇಶಾಲಂಕಾರ ಚೆನ್ನಾಗಿರಲಿಲ್ಲ ಮಡದೀ.."
ಯಪ್ಪಾ..
"ಸತ್ಯದುವಾಚಗಳಿಗೆ
ಈ ಟೈಮಲ್ಲಾದ್ರೂ ರಜಾ ಕೊಡ್ರೀ ಧರ್ಮಪ್ನೋರೇ.. :("
ಮರುತ್ತರಿಸಿದಳು ಲೇವಡಿಯಲ್ಲಿ ಲೇಡಿ..!

ಆಸೆಯಿಂದಾಮೇಲೆ ನೋಡಿದಳು ಬಲಭೀಮನದ್ದು..
"ನಿನ್ನ ಗಲ್ಲ ಒಂದು ಕೇಜಿ ರಸಗುಲ್ಲ..!"
ಥತ್ತೇರಿಕೆ..
"ಕೇಜಿಗಳ ರೊಮ್ಯಾನ್ಸು ಹಿಡಿಂಬೆಗೇ ಸರಿ..
ರಣತೊಡೆಯ ಪ್ರತಾಪೀ,ಪಾಪೀ ಬಿಟ್ಬುಡಪ್ಪಾ ನನ್ನ.."

ಪಾರ್ಥನ ಫೋನಲ್ಲಾದರೂ
ಪಾಪು ಕೊಡುವ ಸೂಚನೆ ಇದ್ದೀತಾ?!
ಇಣುಕಿದಳು ದ್ರೌಪದಿ..
"ನಿನ್ನ ಹುಬ್ಬು ಬಿಲ್ಲು,ನಿನ್ನ ನೋಟ ಬಾಣ..
ಒಟ್ಟಿಗೇ ಸೇರಿದರೆ ಬಿಲ್ಲು-ಬಾಣ..!!"
ಅಯ್ಯೋ ವಿಧಿಯೇ..
"ನಿನ್ನೇ ನಂಬಿದ್ದೆ ಕಣೋ..
ಪಾಪು ಹೋಗಲಿ,
ಟೀ ಸ್ಪೂನು ಪ್ರೀತಿಯೂ ಇಲ್ಲವಲ್ಲೋ ಇಲ್ಲಿ ಅರ್ಜೂ.. :("

ಉಳಿದವರು : ಊರಿಗೊಂದಿದ್ದ ಝೆರಾಕ್ಸ್ ಅಂಗಡಿ ಹುಡುಗರು..!
ಒಬ್ಬರದೊಬ್ಬರ ನಕಲುಗಳು..
ನಕುಲ-ಸಹದೇವ..
ಮಿಕ್ಕಿದೊಂಚೂರು ಆಶಾಕಿರಣಕ್ಕೆ ಕಣ್ಣಗಲಿಸಿ
ಒಮ್ಮೆಲೇ ಓದಿದಳಾ ನಾರಿ
ಟ್ವಿನ್ನುಗಳಿಬ್ಬರ ಸಂದೇಶಗಳ......
"ಗುಡ್ ನೈಟ್ " - "ಸ್ವೀಟ್ ಡ್ರೀಮ್ಸ್"..!!

ಪುತ್ರಿಪ್ರಾಪ್ತಿಯ ಸೊರಗಿದ ಕನಸಿನೊಂದಿಗೆ
ವೃಷಭರಾಶಿಯ ಕುಂಡಲಿ ಕುಮಾರ
ಕರ್ಣ ನೆನಪಾಗಿ
ಬೆಳ್ಳಂಬೆಳಗಿನ ದುರ್ಗಾಂಬಾ ಬಸ್ಸಿಗೆ
ಊರುಬಿಟ್ಟಳು ಮುಡಿಯದ ಹೂ ದ್ರೌಪದಿ..!

ಈ ಕಾರಣವಾಗಿ, ಮದುವೆಯಾದ ಒಂದು ಮಾಸದೊಳಗೇ ಡೈವೋರ್ಸಿನವರೆಗೆ ಹೋಗಿದ್ದ ದ್ರೌಪದೀ-ಪಾಂಡವರ ಈ "ಕಲಹಕಾಂಡ", ಮಹಾಭಾರತ ಕಾವ್ಯದಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ..! ಬಹುಷಃ ಈ ಮೂಲಕ  ಪತ್ರಿಕಾ ಸ್ವಾತಂತ್ರ್ಯದ ಮೇಲೆ ಮನುಕುಲದ ಮೊದಲ ಹಲ್ಲೆಯಾಗಿದ್ದು ಪಾಂಡವರಿಂದ ವ್ಯಾಸರ ಮೇಲೆ ಎನ್ನಬಹುದು..!! :):)

Sunday, April 1, 2012

ಸರ್ವಚಟ ಪರಿತ್ಯಾಗಿಯಾಗಿ..!

ದೈನೇಸಿ ದಾರಿಗಳಿಗಾಗಿ
ದಿನದೂಡಿದ್ದು ಸಾಕು..
ಬಾಡಿದಾದಿತ್ಯನ ಬೆಳಕು : ಕತ್ತಲೆಯೇ..!
ಕ್ಷಿತಿಜದಾಚೆ
ತೇಲಿಹೋಗುವ ತವಕ..
ತಿಳಿನೀರಿದ್ದರೂ ಹರಿವಿಲ್ಲ.

ಸೂಕ್ತಿಗಳ ಒಕ್ಕಣೆಗಳು,
ಟಿಪ್ಪಣಿಗಳ ಅಪ್ಪಣೆಗಳು
ಭರದಿ ಬಡಿದು
ಭುಗಿಲೆದ್ದರೂ
ಸೀದು ಹೋದ ಸಹವಾಸ
ಸಂತ ಪಟ್ಟಕ್ಕೇರಿಸಲಿಲ್ಲ..

ಕಿಂಕರನ ವಸಾಹತು
ಸಂಗ ದೋಷದ
ಸರ್ಪಸುತ್ತಿಗೆ
'ಸಂಘ'ದ ಕಬಡ್ಡಿಯಲ್ಲೂ
ಮದ್ದಿಲ್ಲದಾಯಿತು..

ಗೋಳವನ್ನೇ ನುಂಗಿದ್ದ
ಗೋಕುಲಾಷ್ಟಮಿಯ ಗೊಲ್ಲ
ಏಕಾಗ್ರತೆಯ
ಮೊದಲೇ
ಏಕತಾನತೆಯೆನಿಸಿದ.

ಮೊದಲು ಮುತ್ತಿಕ್ಕಿದ
ಸ್ವಾರ್ಥ
ಈಗ ಮುಕ್ಕಿ ಮುಗಿಸುತ್ತಿದೆ..
ಪಂಚಭೂತ ಸಾಕ್ಷಿಯಾಗಿ
ಮೊಟ್ಟಮೊದಲು
ನಾ 
ಎಳೆದ
ಮುಂಡುಬೀಡಿಗೊಂದು  ಧಿಕ್ಕಾರ..!

ಹರಿವಿಲ್ಲದಿದ್ದು
ನಿಜವಾದರೂ
ಮುಳುಗಿ
ಹತನಾಗುತ್ತೇನೆ.
ಚಟವಿಲ್ಲದವನಾಗಿ
ಮತ್ತೆ ಹುಟ್ಟುವ ಹಠ ತೊಟ್ಟು..!

Thursday, March 22, 2012

ಕಾಮಾತುರಾಣಾಂ..

ನನ್ನ ಮುದ್ದು ಮಗಳಿಗೊಂದು ಪತ್ರ :

ನೀನಂದು ನನ್ನ ಕೈಯ್ಯಲ್ಲಿದ್ದಾಗ ಕೆನ್ನೆ ತೋಯ್ದ ಬಿಸಿಹನಿಯೊಂದು
ಖುಷಿ ತಾಳಲಾರದೇ ಜಾರಿಬಿದ್ದಿತ್ತು ನಿನ್ನ ಪುಟ್ಟುಪಿಂಕು ಅಂಗೈಗೆ.
ಜೋಯಿಸರ ಮಾತ ಊರಿಂದಾಚೆ ಬಿಸಾಕಿ
ನಿನ್ನ ಕಿವಿಯ ಕವಲಲ್ಲಿ ಹೆಸರೊಂದ ತೂಗಿಬಿಟ್ಟಿದ್ದೆ.. "ಸೃಷ್ಠೀ"....

ನಿನ್ನಮ್ಮನ ಥರ ಜಡೆಬಿಡಬೇಡ..
ಅವಳಂತೆ ಸೌಂದರ್ಯ ಸುಕ್ಕಾದೀತು ಎಂದಾಗ
ಬಂದ ಸಿಟ್ಟಿಗೆ ಬಚ್ಚಲ ಕೊಳೆ ಹಾಗೇ ಇತ್ತು.
ಸಾರಿಗೆ "ರುಚಿಗೆ ತಕ್ಕಷ್ಟು ಉಪ್ಪು" ಜಾಸ್ತಿ ಬಿದ್ದಿತ್ತು..!

ಬಂಪರಿಲ್ಲದ ಸೈಕಲ್ಲು,ಮುಂದೊಂದು ಹೂಬೊಕ್ಕೆ
ನಿನ್ನದೊಂದು ಸಿಹಿಮುತ್ತು,ನನ್ನಾಕೆಯ ಕಣ್ಣಲ್ಲಿನ
"ಹುಷಾರು ರೀ" ಎಲ್ಲಾ ಸೇರಿ ಅವತ್ತೊಂದಿನ
ಪೂರ್ಣಚಂದ್ರ ಮೂಡಿದ ಯುಗಾದಿಯಾಗಿತ್ತು ನನಗೆ..!

ನಿನ್ನ ಹಠ ನನ್ನದೂ ಆಗಿತ್ತೇನೋ ಗೊತ್ತಿಲ್ಲ.
"ಅಪ್ಪನ್ ಪಕ್ಕನೇ ಮಲಗ್ತೀನಿ ನಾನು.."
ಸೊಂಟದಾಚೆ ಕಾಲುಹಾಕಿದ ನಿನ್ನ,
ನೀ ನಿದ್ದೆಹೋದ ಮೇಲೆ ಅದೆಷ್ಟು ಮುದ್ದಿಸಿದ್ದೆ ಗೊತ್ತಾ?!
ಅಮೇಲಾಮೇಲೆ ನಿನ್ನ ಹಠ ನನ್ನದೇ ಆಯಿತು..

ಆದರೆ ಅಂದು..

ಮೊದಲೆಲ್ಲೂ ಹಾಗೆ ಗೊತ್ತಿರಲಿಲ್ಲ ನೀನು..
ರಕ್ತವರ್ಣದ ರೇಷಿಮೆ ಸೀರೆ,ಕೆಂಪು ತುಟಿ,
ಅಮಾಯಕತೆಯಲ್ಲಿ ನಂಗೆ ಮಾತ್ರ ಕಂಡ ಮಾದಕತೆ..
ಎಲ್ಲಕ್ಕೂ ಮಿಗಿಲಾದ ತುಂಬು ಕುಪ್ಪುಸ..!

ಕೆಲಸದಲ್ಲಾಸಕ್ತಿಹೀನನಾದೆ..
ನೇವರಿಸಿಕೊಳ್ಳುವ ನಿನ್ನ ಬೆನ್ನೆಲ್ಲಿಂದರಿತಾತು ಪಾಪ.
ತಪ್ಪೆಂದರಿವಿದ್ದರೂ ತಪ್ಪೇ ಮಾಡುತ್ತಿದ್ದೆ.
ನಿನ್ನಪ್ಪನಲ್ಲೊಬ್ಬ ಪಿಪಾಸು ಹುಟ್ಟಿಕೊಂಡುಬಿಟ್ಟ ಮಗಳೇ..

ಛೀ.. ನಾಚಿಕೆಯಿಲ್ಲದ ನಾಯಿ..
ಮನುನಿಯಮವ ಚರಂಡಿಗೆ ತೂರಿದ ಮುಖೇಡಿ..
ಕಾಮವಾಂಛೆಯ ಹಂದೀ..
ಅಯ್ಯೋ..
ಏನು ಮಾಡಲಿ..ನಿನ್ನಾ ಲಾವಣ್ಯದ ಮತ್ತಿಗೆ
ಈ ಸ್ವನಿಂದನೆಗಳೇನೂ ಮಾಡದಾದಾಗಲೇ ನಿರ್ಧರಿಸಿಬಿಟ್ಟೆ..

ಇಂಥ ನನ್ನಂಥವರಿಗೀಜಗವಲ್ಲಮ್ಮಾ..ತಿಪ್ಪೆಯಲ್ಲಿನ
ಹಡಬೆನಾಯಿಗೂ ಈ ಮನಸ್ಥಿತಿಯಿರದಿರಲಿ..
ಅಪ್ಪನಡಿಯುಸುರಿಗೆ ಕೊಳೆತ ಜೀವಚ್ಛವವಾಗದೇ
ತಂದೆಯಿಲ್ಲದ ಮಗಳಾಗಿಯೇ ಜೀವಿಸಿಬಿಡು ತಾಯೀ..
ನಿನ್ನೊಂದು ಹೇಸಿಗೆಯ ನೆನಪಾಗಿಯೂ ಉಳಿಸಬೇಡ ನನ್ನ.

ನಿನಗೆ ಹೇಳಲೇಬೇಕೆನಿಸಿದ್ದಿಷ್ಟು..

ನರಕ ನನಗಾಗಿ ಕಾದಿದೆ..ಹೋಗುತ್ತಿದ್ದೇನೆ.

- ಅಪ್ಪ.

****************************************************
ಇದು "ಈಡಿಪಸ್ ಕಾಂಪ್ಲೆಕ್ಸ್" ಹಾಗೂ "ಎಲೆಕ್ಟ್ರಾ ಕಾಂಪ್ಲೆಕ್ಸ್" ಗಳಂಥ ಮಾನಸಿಕ ವ್ಯಾಧಿಯ ಮೇಲೆ ಬರೆಯಲೆತ್ನಿಸಿದ ಕವನ.ತಂದೆಯೇ ಮಗಳೆಡೆಗೆ ಅನುರಕ್ತನಾಗುವ ಇಲ್ಲಿನ ವಿಷಯಕ್ಕೆ ವೈಜ್ನಾನಿಕ ಭಾಷೆಯಲ್ಲಿ ಯಾವ ಕಾಂಪ್ಲೆಕ್ಸೆನ್ನುತ್ತಾರೋ ಗೊತ್ತಿಲ್ಲ. ಆದರೆ ಪ್ರತಿದಿನ ಒಂದಿಲ್ಲೊಂದು ಪೇಪರಿನಲ್ಲಿ "ಮಗಳ ಮೇಲೆ ತಂದೆಯ ಅತ್ಯಾಚಾರ"ದಂಥ ಸುದ್ದಿಗಳನ್ನು ಓದುತ್ತಿರುವುದು ದುರಂತ.

Monday, March 19, 2012

ಒಂದು ತೂಕದ ಕನಸು..

ಕವನ,ಕವಿತೆ ಬರೀಬೇಕಂತ ಅನ್ಕೊಂಡಿದೀಯ..ಆಯ್ತು.ಆದ್ರೆ ಒಂದ್ ವಿಷ್ಯ ತಿಳ್ಕೋ ಈ ಬರಹಗಳ ಜಗತ್ತಿಗೆ ಮೊದಲು ಕಾಲಿಡ್ತಾ ಇಡ್ತಾ ಏಕ್ ದಂ ಒಂದೇ ಉಸುರಿಗೆ ನಿನ್ನ ಕಲ್ಪನೆಗಳನ್ನೆಲ್ಲ ಕೆತ್ತಿ ನಿಲ್ಲಿಸ್ತೀಯ ಅಂದ್ರೆ ಅದು ಆಗದ ಮಾತು.ಮೊದಲು ಕಲ್ಪನೆಗಳು ಶುದ್ಧವಾಗಿರಬೇಕು,ಚಪ್ಲಿ ಇಲ್ದೇ ದೇವಸ್ಥಾನಕ್ಕೆ ಹೋಗ್ಬೇಕು ಅಂತಾರಲ್ಲ ಹಾಗೆ.ಆಮೇಲೆ ವರ್ಣನೆಗಳಿಗೆ ನೀಟಾದ ರೂಪ ಕೊಡೋದನ್ನ ಕಲೀಬೇಕು,ಕಲೀಬೇಕಂದ್ರೆ ಲೈಬ್ರರಿಯ ಒಂದು ಸಾಲನ್ನಾದ್ರೂ ನುಂಗಿ ಜೀರ್ಣಿಸಿರಬೇಕು.

ನಿನ್ನ ಕವಿದಿಕ್ಕಿನ ರಸ್ತೆ ಬೇರೆ ಬೇರೆ ಆಯಾಮಗಳಲ್ಲಿ ಹಾದು ಹೋಗುತ್ತೆ,ಹೋಗಲೇಬೇಕು.ಮೊದಲ ಹಂತದಲ್ಲಿ ನಿನ್ನ ಪ್ರತಿಯೊಂದು ಮೊದಮೊದಲ ಕಿರುಗವಿತೆಗಳು ಪ್ರಾಸದ ಪಂಜರದಲ್ಲಿ ಸಿಕ್ಕಿಹಾಕ್ಕೊಳ್ತಾ ಇರ್ತವೆ.ಮುಂಚೆ ಏನು ಬರೆದರೂ ಕೊನೆಯಲ್ಲಿ ಮತ್ತದೇ ಪ್ರಾಸದಲ್ಲಿ ಕೊನೆ.ಅರ್ಥವಿಲ್ಲದ್ದನ್ನ ಸುಮ್ಸುಮ್ನೇ ಬರೆದು ಪ್ರಾಸ ಮಾತ್ರ ಸರಿಯಾಗಿರುವಂತೆ ನೋಡಿಕೊಳ್ತೀಯ ನೀನು..! ಹೀಗೇ ಒಂದಿಪ್ಪತ್ತೈದು ಕವನಗಳನ್ನ ಗೀಚಿದ ಮೇಲೆ ನಿಧಾನವಾಗಿ ಪ್ರಾಸದ ಅನಗತ್ಯತೆ ನಿನ್ನ ಗಮನಕ್ಕೆ ಬಂದು ಮುಂದಿನವುಗಳಲ್ಲಿ ಅದು ನಿಂಗೆ ಗೊತ್ತಿಲ್ದೇನೇ ಕಣ್ಮರೆಯಾಗಿರುತ್ತೆ.

ನಂತರದ ಆಯಾಮ ಬಹಳ ದಿನ ಇರುವಂಥದ್ದು:ಪ್ರೀತಿ,ಪ್ರೇಮಗಳ ಮೇಲಿನ ನಿನ್ನ ಪೆನ್ನಿನಾಟ. ಅವಳು,ಅವನು,ಮಲ್ಲಿಗೆ,ನೋಟ,ಜಡೆ,ಅದು ಇದು ಅಂತ ಎಂತೆಂಥಾ ಅದ್ಭುತಗಳನ್ನೇ ನೀನು ಹುಟ್ಟಿಸಿರ್ತೀಯ ಗೊತ್ತಾ..ನೀನು ಹಾಗೇ ಬರೀತಿದ್ರೆ ಪಾಟಿನಲ್ಲಿನ ಗುಲಾಬಿಗೆ ಬಾಡೋದೂ ಮರೆತುಹೋಗಿರುತ್ತೆ..! ಚಂದಮಾಮ,ಬಾಲಮಂಗಳದ ಬದಲು ಬೆಳಗೆರೆ ಬಂದಿರ್ತಾನೆ ನಿಮ್ಮನೆಗೆ.ಬೇರೆಯವರ ಕಮೆಂಟಿಗೆ,ಒಂದಿಷ್ಟು 'ಭೇಷ್'ಗೆ,ಹಾರೈಕೆಗೆ ಕಾಯೋಕೆ ಶುರುಹಚ್ಚಿಕೊಳ್ತೀಯ ನೀನು. ನಿನ್ನನ್ನ ನೀನು ಎಷ್ಟು ಬೇಗ ಈ ಆಯಾಮದಿಂದ ಹೊರದಬ್ಬುತ್ತೀಯೋ ಅಷ್ಟು ಬೇಗ ನೀನು ಅರ್ಧ ಮಾಗಿಬಿಟ್ಟೆ ಅಂತಲೇ ಅರ್ಥ.ಅದಕ್ಕಿರೋ ಒಂದೇ ದಾರಿ ಅಂದ್ರೆ ಮುಂದಿನ ಹಂತದ ಕಡೆಗಿನ ನಿನ್ನ ನೋಟ,ಓಟ.

ಮುಂದಿನದ್ದು ನೆನಪುಗಳ ಮಂಚ.ಹಿಂದೆಲ್ಲೋ ನಿನ್ನ ಬದುಕಲ್ಲಿ ಬಂದು ಹೋದ,ಕಂಡು ಬಿಟ್ಟ,ಛಕ್ಕನೆ ಅಲ್ಲೆಲ್ಲೋ ಮೂಡಿದ,ಆಡಿದ,ಒಡನಾಡಿದ ಸಂದರ್ಭಗಳನ್ನ ಕಟ್ಟಿಕೊಡೋಕೆ ಪ್ರಯತ್ನಿಸ್ತೀಯ.ಕಟ್ಟಿಕೊಡೋದರ ಯಶಸ್ಸಿಗೆ ಬೇಕಾದ ಪದ,ಪಾಂಡಿತ್ಯ,ಪಾತ್ರಗಳು ನಿನ್ನಲ್ಲಷ್ಟುಹೊತ್ತಿಗೆ ಕಾಲ್ಕೆಳಗಿರುತ್ತೆ.ಪ್ರಯತ್ನ ಒಳ್ಳೆಯದ್ದೇ.ಆದರೆ ಈ ಮಧ್ಯೆ ಬೇಡದ,ನೆನಪಿಸಿಕೊಳ್ಳಬಾರದೆನಿಸಿದ ಅದೆಷ್ಟೋ ನೆನಪುಗಳು ಉಮ್ಮಳಿಸಿಬರುವ ವಾಂತಿಯಂತೆ ಬಿಳಿಹಾಳೆಯ ಮೇಲೆ ಹರಡಿಕೊಂಡುಬಿಡುವ ಅಪಾಯ ಇರಬಹುದು.ಭಗ್ನಕವಿತೆಗಳ ಮುಷ್ಟಿಗೆ ಸಿಕ್ಕಿಬಿಡ್ತೀಯ ಆಮೇಲೆ. ಅರ್ಧದಲ್ಲೇ ಎದ್ದುಹೋದ ಹುಡುಗಿ ದಿಕ್ಕಿಗೆ ಮತ್ತೆ ತಿರುಗದೇ ಮುಂದಿನ ಹಂತ ನೋಡು,ಮುಕ್ಕಾಲು ಉದ್ಧಾರ ಆಗ್ತೀಯ.

ಹೀಗೆ ನಿಂಗೆ ಸಿಕ್ಕಿದ್ದು ಈ ಹಂತ:ನಾಲ್ಕನೇ ಆಯಾಮ.ಇದು ನಿನ್ನ ಕವಿತ್ವದ ಪಾಲಿನ ಬಹುಮುಖ್ಯ ಹಾಗೂ ಅಷ್ಟೇ ಸೂಕ್ಷ್ಮದ ಹಂತ.ಇಲ್ಲಿ ನೀನು ಓದೋಕೆ,ಬರೆಯೋಕೆ,ಜೀವಿಸೋಕೆ ಇಷ್ಟಪಡೋದು ನಿನ್ನ ಸುತ್ತಲಿನ ಸಮಾಜದ ಆಗುಹೋಗು,ಬೇಕುಬೇಡ,ಹುಳುಕುಬಳುಕು,ಕೀಟಲೆಕಾಮಗಳ ಮಧ್ಯೆ. ಇಲ್ಲಿ ಏನು ಬೇಕಾದರೂ ಬರೆಯೋ ಅವಕಾಶವಿದೆ ನಿಂಗೆ,ಹಕ್ಕಿಲ್ಲ..! ಸಮಾಜಮುಖಿ ವಿಷಯಗಳನ್ನ ಎಷ್ಟು ಸೂಕ್ಷ್ಮವಾಗಿ ಓದುಗನಿಗೆ ತಲುಪಿಸ್ತೀಯ ಅನ್ನೋದೊಂದು ಸವಾಲಾಗಿ ನಿಲ್ಲುತ್ತೆ ಇಲ್ಲಿ.ಒಂದು ವಿಷಯದ ಬಗ್ಗೆ ಒಂಚೂರು ತಾಳಮೇಳ ಮುಗ್ಗರಿಸಿಬಿಟ್ಟಿತೆಂದರೆ ಸಿಕ್ಕಿದವರು ಹರಿದು ಮುಗಿಸಿಬಿಡ್ತಾರೆ ನಿನ್ನ,ಬರಹಗಳನ್ನ.ಹಾಗಾಗಿ ಧರ್ಮ,ಜಾತಿ,ವ್ಯಕ್ತಿ,ಹೆಣ್ಣು ಇವುಗಳ ಬಗ್ಗೆ ನಿನ್ನ ನಡೆಗೆ ಸ್ವಲ್ಪ ಜಾಗ್ರತೆ ಕೊಡು.ಸಮಯ,ಸ್ವಾತಂತ್ರ್ಯ,ಹಕ್ಕು ದಕ್ಕಿದಾಗ ನೋವಾಗದಂತೆ ಮಗ್ಗಲು ಮುರಿ..! ಈ ಆಯಾಮದಲ್ಲಿ ನಿನಗೆ ಕಥೆ,ಕಾದಂಬರಿ ಬರೆಯುವುದೂ ಕರಗತವಾಗಿರುತ್ತೆ.ನಿನ್ನ ಹಲವು ಬರಹಗಳು ಪತ್ರಿಕೆಗಳಲ್ಲೂ ಬಂದು ನಿನ್ನದೇ ಆದ ಓದುಗ ಬಳಗವನ್ನ ಹುಟ್ಟಿಸಿಕೊಂಡಿದ್ದರೂ ಆಶ್ಚರ್ಯವಿಲ್ಲ.. ಈ ಹಂತದ ಜಂಭ,ಮೀಸೆಯೇರಿಸುವಿಕೆ,ಹುಂಬತನಗಳು ಬಹುತೇಕ ಕವಿಗಳಲ್ಲಿ ಮದುವೆ ಸೀಸನ್ ಬೇಧಿಯಷ್ಟೇ ಕಾಮನ್..! ಅದು ತಂತಾನೇ ನಿಲ್ಲೋಕೆ ಬಿಟ್ಬಿಡು.ಮುಂದಿನ ಆಯಾಮ ತಂತಾನೇ ಮುಂದೆ ನಿಂತಿರುತ್ತೆ..!

ಐದನೇಯದ್ದು:ಇಲ್ಲಿ ನೀನು ಬರೆಯೋ ಕಥೆ,ಕವಿತೆಗಳ ಅರ್ಥ ಅಷ್ಟು ಸುಲಭವಾಗಿ ಓದುಗನಿಗೆ ಗೊತ್ತಾಗೋದಿಲ್ಲ.ಒಂಥರಾ ಪಾರಮಾರ್ಥಿಕ ಚೌಕಟ್ಟು,ಮೈಕಟ್ಟು ಮೂಡಿರುತ್ತವೆ ಅವುಗಳಿಗೆ.ಕಣ್ಣಿಗೆ ಕಾಣದ ಒಂದು ಸಣ್ಣ ಧೂಳು,ನಿನ್ನಿಂದ,ಓದುತ್ತಿರುವವನಿಗೆ ಹತ್ತು ಸಾಲುಗಳ,ಭಾರದ ನಿರೂಪಣೆಯಾಗಿ ಗೋಚರವಾಗಿರುತ್ತದೆ..! ಅಥವಾ ಧೂಳಿನ ವಿಷಯ ಬಿಟ್ಟು ಅಲ್ಲಿ ಬೇರೆ ಇನ್ನೇನೋ ಕಂಡು ಚಪ್ಪಾಳೆ ತಟ್ಟಿರ್ತಾನೆ ಅವ..! ಆದರೆ ಇಲ್ಲಿ ನೀನು ಬರೆಯೋ ಕವನಗಳು ಅತ್ಯಂತ ಉಚ್ಛ ಮಟ್ಟದ್ದಾಗಿರುತ್ತವೆ ಅನ್ನೋದು ಸತ್ಯ.ನಿನ್ನೊಂದಷ್ಟು ಕವಿತೆಗಳು,ಜನ ಮಲ್ಕೊಳೋವಾಗ ಕೇಳಿ ಕಣ್ಮುಚ್ಚೋ ಸಿನಿಮಾ ಹಾಡುಗಳಾಗಿಯೂ ಬದಲಾಗಿರಬಹುದು..! ಈ ಹಂತ ದಾಟಿದೆಯೋ ಮುಂದಿನ ಹೆರಿಗೆ ಸಲೀಸು..!

ಕೊನೆಯ,ಆರನೆಯ ಆಯಾಮ: ಇದು ನೀರಿನ ಗುಳ್ಳೆ ಒಡೆದಷ್ಟು ಸುಲಭವಿರುತ್ತದೆ ನಿನಗೆ.ಇಲ್ಲಿ ನೀನು ಪ್ರಾಸ ಬಳಸುತ್ತೀಯೋ,'ಪ್ರೀತಿ' ತೋರಿಸ್ತೀಯೋ,ನೆನಪು ಹೆಕ್ಕಿ ಗೀಚ್ತೀಯೋ,'ಜಾತಿ'ಗೆ ಸೇರ್ತೀಯೋ,ಅದ್ವೈತವೋ,ವಿಶಿಷ್ಠಾದೈತವೋ ಎಲ್ಲಕ್ಕೂ ಅಶ್ವಿನಿ ಅಸ್ತು ಅಂತಾಳೆ.ಬರ್ದಿದ್ದೆಲ್ಲಾ ಹಾಡು,ಶಾಲೆಪದ್ಯ,ಸಾಹಿತ್ಯ ವೇದಿಕೆ-ಸಮ್ಮೇಳನಗಳ ಬ್ಯಾನರಿನಲ್ಲಿ ನಿನ್ನ ಕಾವ್ಯನಾಮ,ಅಷ್ಟಿಷ್ಟು ಬಿಳಿಕೂದಲು,ನಿನ್ನ ಬರಹಗಳ TRP ಹೆಚ್ಚಿಸೋ ಒಂದಷ್ಟು ಸಂವಾದ,ಟೀಕೆಗಳು.. ಅಬ್ಬಬ್ಬಾ.. ಇಲ್ಲಿ ಗ್ಯಾರಂಟಿ ನಿನ್ನ ಆತ್ಮಕಥೆ ಬರೆಯೋಕೆ ಶುರುಮಾಡಿರ್ತೀಯ ನೀನು..!

ಹೇಳೋಕೆ ಹೋದ್ರೆ ಇನ್ನೂ ಸಾಕಷ್ಟಿದೆ,ತಾಕತ್ತಿದೆ.ಆದರೆ ನೀನಿನ್ನೂ ಸಾಹಿತ್ಯದ ಅ ಆ ಇ ಈ ಕಲಿಯುತ್ತಿರೋ ಅಂಬೆಗಾಲ ಕೂಸು.. ನಾನಿಷ್ಟು ಹೇಳಿದರೂ,ಗೊತ್ತಾಯಿತೆಂದು ಒಂದೇ ಸಲ ನಾಲ್ಕು-ಐದನೇ ಆಯಾಮಗಳಿಗೆ ಹೋಗಿಬಿಡುತ್ತೇನೆ ಅಂದುಕೊಂಡರೆ ಅದು ಅಪ್ಪನ ಬೂಟು ಹಾಕಿದಂತೆಯೇ. ಪುಟ್ಟ ಪಾದಕ್ಕೆ ಪುಟ್ಟ ಚಪ್ಪಲಿಯೇ ಚಂದ ತಿಳ್ಕಾ.

ಹಿಂಗಂದು ಠಣ್ಣನೆ ಮಾಯವಾಗಿಹೋದರು ಕಡಲತೀರದ ಭಾರ್ಗವ..! ಕಣ್ಣುಜ್ಜಿ ಎದ್ದು ಹಾಳೆ,ಪೆನ್ನು ಕೈಗೆತ್ತಿಕೊಂಡೆ,ಬರೆದೆ..

"ಪಕ್ಕದ್ಮನೆ ಅಂಕಲ್ ಬಾಲು
ಮಮ್ಮಿ ಕೊಟ್ರು ಹಾಲು.."

ಓಹ್.. ನಂದಿನ್ನೂ ಮೊದಲ ಹಂತ..!!!
ನಿರಾಶನಾಗದೇ ನಂತರದ ಹತ್ತು ಸಾಲುಗಳ ಕೊನೆಯಲ್ಲೂ 'ಲು' ಬರೆದೆ..!

Saturday, March 17, 2012

ಇನ್ನಷ್ಟು ಹಾಯ್ಕುಗಳು:

* ಹುಟ್ಟು ಕುರುಡನ ನಗ್ನ ಸತ್ಯ:
  "ಅವನು ತನ್ನ ಒಳಗಣ್ಣಿನಿಂದ 'ಭಗವಂತ'ನನ್ನು ನೋಡಬಲ್ಲ..
  'ಬೆತ್ತಲೆ ಚಿತ್ರ' ನೋಡಲಾರ..!!"

* ಮಗು ಹೊಡೆದ ಪಟಾಕಿಗೆ ಬೆಚ್ಚಿದ ಅಂಗಡಿಯವನು
  "ಹಬ್ಬ ಆದ್ಮೇಲೇನೋ ನಿಂದು ಬೋಳಿಮಗನೇ" ಅಂದಾಗ
   ಮಗು ಸ್ಪಷ್ಟವಾಗಿ ಕಲಿತಿದ್ದು ಆತ ಹೇಳಿದ ಕೊನೇ ಪದ ಮಾತ್ರ,
   ಮತ್ತದೊಂದು ದುರಂತ.

* ಇಡೀ ದಿನ ಬಾಯ್ತುಂಬ ಹೊಗಳಿಸಿಕೊಳ್ಳಬೇಕಾದವನು
   ಅಸ್ಪಷ್ಟ ಮುಂಜಾವಿನಲ್ಲೇ ಹಾಳಾಗಿ ಹೋದ.
   ಉಳಿದಿದ್ದು ದಿನಪೂರ್ತಿಯ ಮೌನ.

* ಕರಡಿ ಕಾಡಿಗೆ ಹೋಯಿತು.."
   ಕರಡಿಯ ಬಣ್ಣ ಕಪ್ಪು..
   ಆದರೆ ನಂತರದ ಪದಕ್ಕೂ ಅದೇ ಅರ್ಥ ಸಿಕ್ಕಿದ್ದು ತಮಾಷೆ..!
   (ಕಾಡಿಗೆ - ಕಣ್ಣು ಕಪ್ಪು)

* "ರೇತಸ್ಸು" ಪದದ ಅರ್ಥ ಗೊತ್ತಿಲ್ಲದವನು..
  "ತೇಜಸ್ಸು" ಪದದ ಲೆವೆಲ್ಲಿಗೆ ಅದನ್ನು
   ಕೇಳಿ ಅನುಭವಿಸೋದು ದುರಂತ..!

* ಹೆಣ್ಣು,ಉಪ್ಪಿನಕಾಯಿ ಎರಡೂ ಒಂದೇ..
   ಜೊಲ್ಲಿನ ವಿಷಯಕ್ಕೆ ಬಂದಾಗ..!

* ಕೆಟ್ಟದ್ದನ್ನು ಮಾಡಬೇಡ ಎಂದವನು ಗಾಂಧಿ..
   ಅಡಿಕೆ ಬೆಳೆಗಾರರಲ್ಲ..
   ಅವರು ಗುಟ್ಕಾ ವಿರೋಧಿಗಳಲ್ಲ...!!

Friday, March 16, 2012

ಅವನಲ್ಲ "ಅವನಿ"ಗೆ...

ಗೆಲುವಿನ ಕಾಮಗಾರಿ ನಡೆದಿದೆ ಇಲ್ಲಿ..
ಕಾದ ಕಬ್ಬಿಣಕ್ಕೆ ಬೀಳುವ ಪೆಟ್ಟು ನಾಜೂಕಿನದ್ದಾಗಿರಬಾರದು..
ಶ್ರಮದ ಕೂಸಿಗೆ ಮುತ್ತಿಡಬೇಕಾದರೆ
ಶ್ರಮದ ಮೊದಲ ರಾತ್ರಿಯಲ್ಲಿ ಶ್ರಮಪಡಲೇಬೇಕು.

ಕಾಲಿಗೆ ತೊಡರುವ ಬಳ್ಳಿಯಂಥದ್ದು
ಹಣೆಬರಹದ ಗೆಲುವಷ್ಟೇ.
ಪ್ರಯತ್ನದ ಮುಂದಿನ ರೂಪವಲ್ಲ ಅದು.
ಗೆಲುವೆಂಬುದು ಹುಡುಕಿ ಹೋಗುವ ಬಳ್ಳಿಯಾಗಬೇಕು.

ಗೆಲುವಿಗೆ ನೂರು ಅಪ್ಪಂದಿರಂತೆ,
ಸೋಲು ಅನಾಥನಂತೆ.
ಸೋತವನು ಅನಾಥನಲ್ಲ,
ಗೆದ್ದವನಿಗಿದ್ದವನು ಒಬ್ಬನೇ ಅಪ್ಪ.
ಹೆಚ್ಚೆಂದರೆ ಸೋತವನು ಸೋತಿರಬಹುದು,
ಸತ್ತಿಲ್ಲವಲ್ಲ..?!

ಜಾತಕದವನು ಸಾವಿರ ಹೇಳಿದನಂತೆ:
ಗಂಡವಿದೆ,ಗೆಲುವಿಲ್ಲ,ಬರಿಸೋಲೇ..
ಅವನಾಡಿದ್ದು ನಿಜವೆಂದಾಗ
ಮುಕ್ಕೋಟಿ ದೇವರಾಟಗಳು ಲೆಖ್ಖಕಿಲ್ಲದವೇ..!

ಕೊನೆಯದಾಗಿ,

ಕಾಯಕ,ಕೈಲಾಸಗಳ ಕಷ್ಟ ಬೇಡವೆನ್ನುವವನು
ಕಾಡು ಕುರಿಯ ಕಾವಲಿಗೂ ಹೇಳಿಮಾಡಿಸಿದವನಲ್ಲ.
ಅವನಿಗಲ್ಲ ಗೆಲುವು,
ಅವನಲ್ಲ "ಅವನಿ"ಗೆ...

Wednesday, March 14, 2012

ಶಕ್ತಿಪಾತಮಾತಾ ತಾಂತ್ರಿಕಾಭಿವ್ಯಕ್ತಿಸ್ವರೂಪಿಣೀ..

ನಾಸಿಕದ ಗತ್ತಿನಂಥ ನತ್ತು,
ಬೆಂಡೋಲೆಯಂಡಲ್ಲಿಲ್ಲದ ಚುಚ್ಚುಗಾಯ,
ಕಿರುಬೆರಳಿನ ಕತ್ತಿನುಂಗುರ,
ಹಾರ,ಸಿಂಗಾರ,ರೇಷ್ಮೆನೂಲು..

ಪಂಚಾಕ್ಷರಿಯಭಿನಂದನೆ,
ಮಲ್ಲಿಗೆಹಾರ ಡೊಂಕಾಗಿನಿಂತ ಚೂಪೆದೆ,
ಎದೆಸೀಳಿಗಿಳಿಯದ ಪಚ್ಚೆಮಣಿಮಾಲೆ,
ಖಣಖಣಿಸಿಯೂ ಒಡೆಯದ ಕುಸುರಿಬಳೆ..

ಪೂರ್ಣಕುಂಭಕ್ಕೊರಗಿದ ಜುಟ್ಟುಗಾಯಿ,
ಪ್ರಭಾವಳಿಯೊಡತಿ.. ಅರಿಶಿನಪ್ರಭಾವತೀ,
ಕಿರೀಟದಂಚಿನ ಸರಮುತ್ತಿನ ಕೊನೆಯಗಂಟು,
ಹನ್ನೆರಡಾರತಿ ಸಾಕೆನ್ನದ ದೀಪಮೋಹಿತೆ..

ಸಾವಿರ ಸೂಜಿಮೊನೆಕಾಡುಗಳ ಶಾಂತವನ:ವದನ,
ಬಂದಿ ಬಂಧಿಸಿದ ತುಂಬುತೋಳು,
ಅಲೆಯಾದಿಯೆನಿಸುವ,ತರಿಯಿಲ್ಲದ ತಲೆಗೂದಲು,
ಜೇನು,ಹಾಲು,ತುಪ್ಪದ ತಪ್ಪದ ದಿನಸ್ನಾನ..

ಧೂಪ,ಘಮ,ಪ್ರಣಾಮ..ಸ್ತ್ರೀರಾಮ,
ಸುಷುಮ್ನಾತೀರದ ಸಹಸ್ರಾರಶ್ರೀಮಂತೆ,
ಬಿಸಿಪತಿಯ ಒಳಗಿಳಿಸಿ ತಣಿಸಿದ ಭಗ,
ಕಾಮಿನಿ,ಜನನಿ,ಭಗಿನಿ,ಕುಂಡಲಿನಿ,
ಶಕ್ತಿಪಾತಮಾತಾ ತಾಂತ್ರಿಕಾಭಿವ್ಯಕ್ತಿಸ್ವರೂಪಿಣೀ..

LSD(Drugs) ಸೇವಿಸಿ ವೇಶ್ಯಾಗೃಹಕ್ಕೆ ಹೋದಾಗ ಮಂಚದ ಮೇಲೆ ಕೂತವಳನ್ನ ಹೀಗೆ ಕಂಡು ವಾಪಾಸ್ ಓಡಿ ಬಂದವನೊಬ್ಬನ ಉವಾಚ..!!

ಸಂಸಾರ - ಸನ್ಯಾಸ

ಯೋಗಿ ಹೇಳುತ್ತಾನೆ..
ಬಾರೋ ಮನೆಯಿಂದಾಚೆ..ಹಳಸಿದ ಹೊಲಸಿದೆ ಅಲ್ಲಿ,
ಶಯನದ ಶೋಭನ ಶುಭವಲ್ಲ ನಿನಗೆ,
ಶುಚಿಯಿದ್ದಲ್ಲಿ ಶಿವನಿರುತ್ತಾನೆ..!

ಸಂಸಾರಿ ಹೇಳುತ್ತಾನೆ..
ಧ್ಯಾನ ಮಾಡಲು ನೆಲವಾದರಾಯಿತು,ಗುಹೆಯೇ ಯಾಕೆ?
ಕೈಲಾಸ ಗಬ್ಬೆದ್ದ ಗುಹೆಯಲ್ಲ.. ಶಿವನ "ಮನೆ"...!

ಯೋಗಿ ಇನ್ನೊಮ್ಮೆ..
ಯಮನ ಪಾಶದ ಒಂದು ಎಳೆಗೆ
ಒಂದಿನದ ವೀರ್ಯನಾಶ ಸಮ..
ಕೈ ಕೆಸರಾದರೆ ಕೊನೆಯುಸಿರು ಅಷ್ಟೇ..!!

ಇತ್ತ ಸಂಸಾರಿ..
ಎಲವೋ ಯೋಗಿ..ನೀನು ಹುಟ್ಟಿದ್ದು
ನಿನ್ನಮ್ಮನ ಬಸಿರಿನಿಂದ,
ನಿನ್ನಪ್ಪನ ಬಿಸಿಯುಸಿರಿನಿಂದ..ಕೆಸರಲ್ಲ ಅದು..
ದೇವರು ದೂರವಾಗುವುದು ತಪ್ಪುಗಳಿಂದ..
ಕೊನೆಯ ತಪ್ಪು ಕೊನೆಯದಾಗಿದ್ದರೆ
ಭೋಗಿ ಯೋಗಿಯಷ್ಟೇ ಪವಿತ್ರ..

ನಾಳೆ ಸುಮ್ನೆ ಮನೆಗೆ ಬಾ..

ಸಂಸಾರಿ -- ಅಪ್ಪ
ಯೋಗಿ -- ಮಗ...!

Tuesday, March 13, 2012

ಅಯ್ಯೋ ಕಷ್ಟ..

ನನ್ನದೇ ಕಷ್ಟಗಳಿಗೆ ಕಾವಲಾಗುವ ಆಸೆ..!
ಈ ಕಷ್ಟಗಳ ಗಾಂಚಾಲಿ ಸಾಮಾನ್ಯದ್ದಲ್ಲ..
ಎದೆಯೊಡ್ಡಿದಷ್ಟೂ ತಡೆಯೊಡ್ಡುವ
ಬೇವಾರಸಿ ಜಾತಿಯವು,ಅವು.

ಕಾವಲಾಗಿ,ಕಣ್ಣಲ್ಲಿ ಕಣ್ಣಿಟ್ಟು ಸಾಕಿ,ಕಾಪಾಡಿ,
ಮೇವು ಹಾಕಿ ಕೊನೆಗೊಮ್ಮೆ ಹೊಂಚು ಹಾಕಿ
ಕೊಂದುಬಿಡಬೇಕು ಅವುಗಳನ್ನ..!

ಬೆನ್ನ ಚೂರಿಯೆಂದಾದರೂ ಅಂದುಕೊಳ್ಳಲಿ,
ಹತ್ಯೆ ಮುಖ್ಯ ನನಗೆ.
ಬೆನ್ನಟ್ಟಿ ಮಗ್ಗಲು ಮುರಿಯಬೇಕು,
"ಕಷ್ಟ"ದ ಕೂಗು ಗಂಟಲಲ್ಲೇ ಅಂಟಿಹೋಗಬೇಕು,
ಆದಷ್ಟೂ ಭೀಕರವಾಗಿರಬೇಕು ಆ ಸಾವುಗಳು.

ಮುಹೂರ್ತ ನೋಡಿ ಅವುಗಳ ಪಿಂಡವಿಡಬೇಕು.
ತಿನ್ನಲು ಕಾಗೆ ಬಂದರೆ ಅದನ್ನೂ
ಕೊಕ್ಕು ಮುರಿದು ಸಾಯಿಸಬೇಕು..!
"ಕಷ್ಟ ಪಿಂಡ"ವ ತಿಂದು ಕಾ..ಕಾ ಎನ್ನುವ ಬದಲು
ಕ..ಕ.. ಎನ್ನುವಂತಾಗಬಾರದು ಅದು..!, ಪಾಪ.

ಮುಂದೊಬ್ಬ ಬುದ್ಧ,
ಕಷ್ಟವಿಲ್ಲದವನ ಬಳಿಯಿಂದ ಕಾಫಿಪುಡಿ ತಾ..ಎಂದಾಗ
ಹತ್ತೂರಿನ ಜನ ನಮ್ಮನೆಮುಂದೆ ಸಾಲುಗಟ್ಟಬೇಕು..!
ಕಾಫಿಪುಡೀ..ಕಾಫಿಪುಡೀ.. ಎಂದು ಕೂಗಬೇಕು..!!

ಆದರೆ ಈ ಇಮ್ಮಡಿ ಬುದ್ಧನಿಗೆ ಬುದ್ಧಿಯಿಲ್ಲ.
ಕಷ್ಟವಿಲ್ಲದವನು ಶ್ರೀಮಂತನಾಗಿರಬೇಕೆಂದಿಲ್ಲ..
ಸಾವಿರ ಟನ್ನುಗಳ ಕಾಫಿಪುಡಿ ಸರಬರಾಜಿನ
"ಕಷ್ಟ"ಕ್ಕೆ ಹೆದರಿ ಕೊನೆಗೂ
ನನ್ನ ಕಷ್ಟಗಳಿಗೆ ಕಾವಲಾಗುವ ಆಸೆ ಬಿಟ್ಟೆ..!

(ಆಸೆಯೇ ಕಷ್ಟಕ್ಕೆ ಕಾರಣ..! - ಬುದ್ಧ-2)

Sunday, March 4, 2012

ಇಳಿಸಂಜೆಯ ಕಣ್ಣೀರು

ದೂರದ ಮಯೂರನ ಮುದಕ್ಕೆ ಕಾದ
ಕಪ್ಪು ಸಂಜೆಯೊಂದು
ಹೆಪ್ಪುಗಟ್ಟಿದ ತಂಪ ಸಡಿಲಿಸಿ
ಕಣ್ಣೀರಾಯಿತು..:
ಆಗ ತಾನೇ ಜನಿಸಿದ ಆ ಮುಪ್ಪು ವಿಧವೆಯ ಕಂಡು..

ಜಾವದ ರಂಗೋಲಿ ಚುಕ್ಕಿ ತಪ್ಪಿದ ದಿನ,
ರಂಗಪ್ರವೇಶದ ಕಾಲ್ಗಳು ಫಕ್ಕನೆ ನಿಂತ ದಿನ,
ಕೊಟ್ಟ ಸಂಪಿಗೆಯನ್ನ ಶಕುಂತಲೆಯಾಗಿ ಮುಡಿದ ದಿನ,
ಏಳ್ಪದಿಗಳು ಸರಸರ ಮುಗಿಯಬಾರದೇ ಎನ್ನಿಸಿದ ದಿನ..
ಎಲ್ಲ ಕಡೆ ಇದ್ದ ಅವನಿವತ್ತು ಮಡಿದ ದಿನ..

ಕನ್ನೆತನದ ಕದಲಿಕೆಯಲ್ಲಿನ ಜೋಡಿಯುಸಿರುಗಳಲ್ಲೊಂದನ್ನು
ಕಾಲದ ಕೋಡಿ ಬಾಚಿ ತಿಂದಿದ್ದನ್ನು
ಕೆನ್ನೆಯಲ್ಲಿಳಿದ ಕಣ್ಣೀರು
ಮತ್ತೆ ಹೊತ್ತು ತರದು..
ಬೇಡುವ ಕಪಾಲ ಪರಶಿವನದ್ದಾದರೂ ಸರಿಯೇ..
ಭಿಕ್ಷೆಯಿಲ್ಲವೆಂದಮೇಲೆ ಭಿಕ್ಷೆಯಿಲ್ಲ.. ಅಷ್ಟೇ..

ತಲೆ ತಿರುಗಿದ ಆ ಗುಳಿಗೆ ಬೇಡದ ಘಳಿಗೆಯನ್ನ
ಹಿಂದೊಮ್ಮೆ ಕಚ್ಚಿ ಎಳೆದ ಗಡಸು ಕಿವಿಯಲ್ಲಿ
ಬೆನ್ನಿನಂಬಾರಿಯಾಸೆಗೆ ಬೇಗ ಹೇಳಿದ್ದು..
ಬಂಜೆಯಲ್ಲದವಳಾಗಿ ಬೆನ್ನಿನಿಂದ ಇಳಿದಿದ್ದು
ಸುಕ್ಕಾದ ಭಾವಗಳಲ್ಲಿ ಬೆರೆತುಹೋಗಿದೆ,ಮರೆತಿಲ್ಲ..!

ಹೆತ್ತಮ್ಮನದು ಮುತ್ತೈದೆ ಸಾವಂತೆ..
ಹೆತ್ತ ಮಗಳಿನ್ನೂ ಇಳಿಯದೆದೆಗಳ ಸಂಸಾರಗಿತ್ತಿ..
ತನ್ನ ಕೇಳುವರ್ಯಾರಿಲ್ಲಿ..??
ಕುಂಕುಮದ ಕೆಂಪಿನಾಸೆ ಮುದುಕಿಗಿರಬಾರದೇ?
ಭಾಗ್ಯದ ಬಳೆಗಾರ ಕೋಪಿಸಿಕೊಂಡನೇ?
ಮನೆಯೆದುರಿನ ಹೂಬಿಟ್ಟ ಗಿಡ ಅಣಕಿಸುತ್ತಿದೆ..

ಏನಾದರಾಗಲಿ..
ಒಂಟಿತನದ ಬಾಲ್ಯಸ್ನೇಹಿತೆ ತಾನಂತೂ ಅಲ್ಲ..
ಬಾರದವನು ಬೇರೆಯೆಂದಲ್ಲ..
ಗೂನು ಸ್ವಲ್ಪ ಕಾಡಬಹುದು..
ಹಲ್ಲಿಲ್ಲದ ಮೆಲ್ಲುವಿಕೆಗೆ ಆತ ಬಿಟ್ಟುಹೋದ
ನೆನಪ ತಾಂಬೂಲವಿದೆ..
ಗಿಡದ ಹೂವಿಗೆ ಬುದ್ಧಿ ಕಲಿಸಲು
ಮುಂದೆ ಅಳಿಯ ಮಾಡಿಸುವ ತನ್ನವನ ಭಾವಚಿತ್ರವಿದೆ..!

ಹಾಗೆ ಜಗುಲಿಯ ಈ ಮೂಕಜ್ಜಿಯಲ್ಲಿ
ಕನಸುಗಳು ಮತ್ತೆ ಆಕಳಿಸಿ ಕಣ್ಬಿಡುತ್ತಿವೆ..
ದೂರದಲ್ಲಿನ ಮಯೂರನ ಮುದವಿಲ್ಲದೆಯೂ
ಸಂಜೆಯ ಕಣ್ಣೀರಿನ ಮೌನ ಸಾಂತ್ವನಕ್ಕೆ
ಕೊನೆಗೂ ಫಲ ಸಿಕ್ಕಿದೆ..!!

Wednesday, February 29, 2012

ಇದು ಕಣೇ ವಿಷ್ಯ..


ತೊಡೆಗೆ ನಾಯಿಕಚ್ಚಿದ ಗುರುತೂ ಕಾಣುವಂಥ ಮಿಣಿಲಂಗದ ಮಹಿಳಾ ಅಮ್ಮಣ್ಣಿಗಳ ಮಧ್ಯೆ ಚೌರಾಸಿಯಾ ಭಾನ್ಸುರಿ ನಾದದ ಗಾಂಭೀರ್ಯತೆಯಂತೆ ಭಾಗ್ಯಲಕ್ಷ್ಮಿಯ ಹಾಗೆ ಸೆರಗನ್ನ ಸರಿಯಾಗಿ ಹೊದ್ದ ನಿನ್ನ ನೋಡಿ, ಮರಿಕುನ್ನಿ ಥರ ನಿನ್ನ ಹಿಂದೆ ಓಡಿ, ನೀ ಬೇಡವೆಂದರೂ ನಡಿಗೆ ಸೈಕಲ್ಲಾದಿಯಾಗಿ ಬಸ್ಸಿನಲ್ಲೂ ಬೆಂಬಿಡದೇ ಸುತ್ತುವ, ಬೈಸಿಕೊಳ್ಳುವ ಮೊಂಡು ಹಠಕ್ಕೆ ಬಿದ್ದು, ನೀ ಬೇಜಾರಾದರೂ ಸರಿಯೇ ಎಂದು ಶಪಥಗೈದ ಬಬ್ರುವಾಹನನಂತೆ, ಛಲ ಬಿಡದ ವಿಕ್ರಮಾದಿತ್ಯನಂತೆ ಹಠಬಿಡದೇ ಪ್ರತಿದಿನದ ಮುಂಜಾವು,ಮಧ್ಯಾಹ್ನ,ಮುಸ್ಸಂಜೆಗಳ ಸಮಯಗಳಿಗೆ ಸರಿಯಾಗಿ ನಿನ್ಮುಂದೆ ವಿಧೇಯ ವಿದ್ಯಾರ್ಥಿಯಂತೆ ಹಾಜರಾಗುತ್ತಿದ್ದುದು, ಕೊನೆಗೊಂದು ಸುಂದರ ಶನಿವಾರ ಶಕ್ತಿ ಮೀರಿ ಬಾಯಿಗೆ ಬಂದಂತೆ,ಬಂದಿದ್ದೆಲ್ಲಾ ಬೈದಿದ್ದು ಬೇಜಾರಾಗಿ , ಮನಸಿಗೆ ಖೇದವೆನಿಸಿದರೂ ಕೆಳಗಿದ್ದ ಪ್ಯಾರಗಾನಿಗೂ ನಿನ್ನ ಕೈ ಹೋಗಿದ್ದು, ಹೋಗಿದ್ದು ನೋಡಿ ನಾ ಓಡದೇ ಜನಿವಾರ ಹಿಡಿದು ನಿಂತಲ್ಲೇ ಅವುಡುಗಚ್ಚಿ ನಿಂತು ನಂಗೆ ನಿಶ್ಶಕ್ತಿಯಾಗಿದ್ದು ಅತಿಶಯೋಕ್ತಿಯಲ್ಲದ ಆಶ್ಚರ್ಯಕರ ಸಂಗತಿಯಾದರೂ ಈ ನಡುವೆ,ಒಮ್ಮೆ,ಒಂದೇ ಒಂದು ಸಲ ನನ್ನ ಉವಾಚಕ್ಕೆ ಅವಕಾಶವಿತ್ತಿದ್ದರೆ ನಿನ್ನಲ್ಲಿ ನಾ ಕೇಳಬಯಸಿದ ಹೇಳಬಯಸಿದ ಪ್ರಶ್ನೋತ್ತರದ ಅವಧಿ ನಿನ್ನ ಕಾಲೇಜಿಗೆ ಲೇಟಾಗುವಷ್ಟೇನಿರಲಿಲ್ಲವಾದ್ದರಿಂದ,ಈಗಲೂ ಸಮಯ ಮೀರಿಲ್ಲವಾದ್ದರಿಂದ, ಅನಿಸಿದ್ದನ್ನು ನೇರವಾಗಿ ಹೇಳುವ ನೇರವಂತಿಕೆಯ ಹುಡುಗ ನಾನಾದ್ದರಿಂದ, ಅಂಥ ಮಡಿವಂತಿಕೆಯ ಹುಡುಗಿಯೂ ನೀನಲ್ಲವೆಂದು ನಂಗೆ ಈಗೀಗ ಗೊತ್ತಾದ್ದರಿಂದ ಕೇಳಿಹೇಳೇಬಿಡುತ್ತೇನೆ ಕೇಳು.. "ಥತ್ತೇರಿಕೆ.. ನಿನ್ ಹತ್ರ ದೊಡ್ ಪಿನ್ ಚಾರ್ಜರ್ ಇದ್ಯಾ..? ನಂದು ಹಳೇ ನೋಕಿಯಾ ಸೆಟ್ಟು.. ಎರಡು ಪಿನ್ ಹಾಕಿದ ಸೆರಗು ಮತ್ತು ಚೂರ್ರಲ್ಲಿ ಹೊಡೆಸಿಕೊಳ್ಳುತ್ತಿದ್ದ ಪ್ಯಾರಗಾನು ನೋಡಿ ನಿಂದೂ ಹಳೇ ಸೆಟ್ಟೇ ಅನ್ಕಂಡೆ..!!".

ಚಿತ್ರಗೀತೆಯ ಶೈಲಿಯಲ್ಲೊಂದು ಪ್ರಯತ್ನ..

ಕಿರುಬೆರಳು ಸೋಕಿದ ಇಬ್ಬನಿಯೇ..
ಸೋರಿಹೋಗದಿರು ನೀನೆಂದೂ..
ಮುಂಗುರುಳ ಅಂಚಿನ ಮಳೆಹನಿಯೇ..
ನಿನಗಿಂತ ಸುಂದರ ಅವಳೆಂದೂ..
   ಇಬ್ಬನಿಯ ಮೌನದಲ್ಲೇ..
   ಮಳೆಹನಿಯ ತಂಪಿನಲ್ಲೇ..
   ಹಿತವಾಗಿ.. ಮಲಗು ನೀನು..
   ಹೃದಯದ ಪರಿಧಿಯೊಳಗೆ..
   ಹೃದಯದ ಪರಿಧಿಯೊಳಗೆ..   ||ಕಿರುಬೆರಳು..||

ಮನಸಿನ ಮಂಚದಿ ಒಮ್ಮೆ..
ಮಂಜಿನ ಹಾಳೆಯ ಮೇಲೆ..
ಒಲವಲೀ ನಿನ್ನನು ಗೀಚಿ..
ಭ್ರಮಿಸಿದೆ ನನ್ನ ಭ್ರಮರವೆಂದು..
ಮೂಡಿದಾ ಹೂವು ನೀನೆಂದು..
  ಪಿಸುಮಾತಿನ ನನ್ನ ಭಾಷಣ..
  ನೀನಲ್ಲಿನಾ ವಿಶೇಷಣ..
  ಹೊಸದಾಗಿ.. ಜನಿಸು ನೀನು..
  ಕವನದ ಗರ್ಭದೊಳಗೆ..
  ಕವನದ ಗರ್ಭದೊಳಗೆ..  ||ಕಿರುಬೆರಳು||

Thursday, February 23, 2012

ಸೆಣಬುಗಂಟಿನ ಮೆಲುಕುಗಳು

ಜಾರಿಹೋದ ವಯಸ್ಸು ಮತ್ತೆ ನೆನಪಾಗಿದೆ..
ಮೆದುಳಿನ ಸೆಣಬುಗಂಟಿನ ಗೋಣೀಚೀಲದಲ್ಲಿ
ಶುರುವಾದವು ಯೌವನದ ಮೆಲುಕುಗಳು..
ನಾ ದೊಡ್ಡವನಾದ ದಿನದೊಂದಿಗೆ..!

ನನ್ನ ದ್ವಂದ್ವಾರ್ಥದ ದಿನಗಳು
ಬಹುಷಃ ಹಲವರಿಗಿಂತ ಭಿನ್ನವೇನೋ..
ಕಾರಣ..
ರಕ್ಷಾಬಂಧನದ ದಿನ ರಜಾ ಹಾಕಿದ್ದೆ..
ಅಣ್ಣನಾಗುವ ಭಯಕ್ಕಲ್ಲ..
ಹುಡುಗಿಯರ ಕೈ ತಾಗುವ ಹೆದರಿಕೆಗೆ..!

ಕಳೆದ ವರ್ಷ ಅಸಹ್ಯವೆನಿಸಿದ್ದ
ತೇಪೆ ರಿಬ್ಬನ್ ಹುಡುಗಿ ಮಾಲಾ..
ಅವತ್ತಿನ ನನ್ನ ಮಟ್ಟಿಗೆ ಶಿಲಾಶ್ರೀಮತಿಯಾಗಿದ್ದು
ಈಗ ನೆನಪಾದ ಅಸಹ್ಯಗಳಲ್ಲೊಂದು..!
ಆಸೆಯೇ ಎದ್ದು ಬುದ್ಧನ ಮೇಯ್ದ ಕ್ಷಣ ಅದು..!

ಸ್ಪರ್ಶದ ಬಿಸಿ ಸುಟ್ಟಿದ್ದು..
ಪೆನ್ನು ಕೊಡುವಾಗ ರಾಧಿಕಾ ಕೈ ಮುಟ್ಟಿದ್ದು..
ಎರಡಕ್ಕೂ ಒಂದೇ ಪ್ರಶ್ನೆಯಿತ್ತು ನನ್ನಲ್ಲಿ.
"ಯಪ್ಪಾ.. ಏನಿದು ಹಿಂಗೆ..?!"
ಪುಳಕಕ್ಕೆ ಪರಿಧಿಯಿಲ್ಲವಂತೆ..!

ಬರುಬರುತ್ತಾ ಎದೆ ನೋಡುತ್ತಿದ್ದೆ..! ತಾಳಿ ಹುಡುಕಲು..!!
ಪಾದ ನೋಡುತ್ತಿದ್ದೆ.. ಕಾಲುಂಗುರದ ಹುಡುಕಾಟದಲ್ಲಿ.
ಹುಡುಕಿದ್ದು ಕಂಡರೆ ನೆನಪಾಗುತ್ತಿದ್ದವಳು ಅಮ್ಮ.
ಇಲ್ಲದಿದ್ದರೆ..
ಒಂದು ನಿಟ್ಟುಸಿರಿನೊಂದಿಗೆ ಮುಂದಿನ ಕ್ರಮ..!

ಹಾಗೊಂದು ಹುಡುಕಾಟದಲ್ಲಿ ಸಿಕ್ಕವಳೀ ಗೌರಿ..
ಆಮೇಲೆ..
ಮದಗಜಕ್ಕೆ ಕಿರುಸರಪಳಿ..
ಮೊಂಡುಹೋರಿಗೆ ಮೂಗುದಾರ..
ಕೊಬ್ಬಿದ ಕುದುರೆಗೆ ಕಣ್ಣುಪಟ್ಟಿ..
ಹಾಗೂ..
ಸ್ನೇಹಿತರ ಮಧ್ಯೆ ಅಂಕಲ್ ಪಟ್ಟ..!

ಈಗ ಮನಸು ಕೈಲಾಸದ ರಾತ್ರಿಗಳಷ್ಟು ಮೌನಿ..
ಪಕ್ಕದ ಪಾರ್ವತಿಗೆ ಗಂಗೆಯ ಭಯವಿಲ್ಲ..
ಮನದ ಮಾನಸಸರೋವರ
ತನ್ನೊಡಲಲ್ಲಿವಳನ್ನಡಗಿಸಿಕೊಂಡು
ಹೆಪ್ಪುಗಟ್ಟಿಬಿಟ್ಟಿದೆ.
ಮತ್ತು..
ಸೆಣಬುಗಂಟಿನ ಮೆಲುಕುಗಳು
ಬಾಕಿ ಇರುವಂತೆಯೇ ಮುಗಿದಿವೆ....

Monday, February 13, 2012

ಮಾ

ಯಾತ್ರೆಯ ಮೋಹದೊಳಗೆ
ಕಂಡುಬಿಟ್ಟ ಊರುಗಳು ಅದೆಷ್ಟೋ..
ಸಾವಿರ ಬಣ್ಣಗಳು,
ನೂರಾರು ವೇಷಗಳ ಮಂದಿ
ಒಂದಾದ ಜುಗಲ್ ಬಂದಿ..
ಕೋಟಿ ಕೋಟಿ ಕಂಠ ಕಲ ಕಲ ನಿನಾದ ಕರಾಲೇ..

ಒಂದೆಡೆ ಹಸಿರು,ಇನ್ನೊಂದೆಡೆ
ಬಿಸಿಲ ಉಸಿರ ಬಸಿರು..
ಟೆರೇಸು,ಹೆಂಚು,ಗರಿಮನೆಗಳು
ಎಲ್ಲವೂ ಕೊಡುವುದು ಒಂದೇ ನೆರಳು..
ಸುಜಲಾಂ ಸುಫಲಾಂ ಮಲಯಜಶೀತಲಾಂ..

ಬೇರೆಲ್ಲಾ ಮಣ್ಣಿನ ಕಡು ಹಳದಿ ಸೂರ್ಯ
ದೈವ ದಿನಕರನಾಗಿದ್ದಾನೆ ಇಲ್ಲಿ.
ಪಶ್ಚಿಮದವರು ಕಂಡಕಡೆ ಕೊಲ್ಲುವ
ಬಲಿ 'ಪಶು'.. ಕಾಮಧೇನುವಾಗಿದ್ದು ಇಲ್ಲೇ..
ಹೃದಯೇ  ತುಮಿ ಮಾ ಭಕ್ತಿ..

ಚಾಚಿದ ಕಾಲ್ಗಳ ಮೇಲೆ
ಮಕಾಡೆ ಕಂದಮ್ಮಗಳ ದುಂಡು ಸ್ನಾನ..
ಬಾಚುವ ಕೈಗಳ ತುಂಬ
ಗೊಂಚಲು ಕೂದಲ ಎಣ್ಣೆಗಂಪು..
ಅವಳು ಸೀರೆಯುಟ್ಟ ಭಾರತ ಮಾತೆ..
ಸುಹಾಸಿನೀಂ.. ಸುಮಧುರಭಾಷಿಣೀಂ..

ಹಾಗೊಮ್ಮೆ ನೋಡಿದರೆ ಮುಗಿಯದ ನನ್ನ ನಾಡು..
ರಾತ್ರಿಯಾದಂತೆ ಹೆದರಿ
ಮನೆಗೋಡಿಬಂದಾಗ ಬರಸೆಳೆದು
ಮುತ್ತಿಕ್ಕುವ ತಾಯಿಯಂಥ ಗೂಡು..

ಭಾರತ..

ನನ್ನ ದೇಶ,ನನ್ನವಳು,ನನ್ನವನು.. ನನ್ನದು.
ಅಬಲಾ ಕೇನ ಮಾ ಏತ್ ಬಲೇ..

Sunday, February 5, 2012

ಮತ್ತಷ್ಟು ಹಾಯ್ಕುಗಳು..

* ಬಿಟ್ಟು ಹೋದ ಅವಳ ನೆನಪನ್ನ ತರದೇ
  ಬರೀ ಚಪ್ಪಲಿ ನೆನೆಸುವ ಮಳೆ..
  ಮನಸಿಗೆ ತುಂಬ ಹಿತ..!

* ಕವನ ಬರೆಯಲು ಬರದ ಕೈಗಳಿಗೆ
  ಇಂಕು ಖಾಲಿಯಾದ ಪೆನ್ನೇ ಬೆಸ್ಟ್ ಫ್ರೆಂಡ್..!

* ಹಿಂದೆಂದೋ ಮಾಡಿದ ಪುಣ್ಯ ನಮ್ಮನ್ನು ಕಾಯುವುದೆಂದು
  ರುಜುವಾತಾಯಿತು..
  ಬೆಳಗ್ಗೆಯಿಂದ ಬಸಿರು ಬೇನೆ ತರುತ್ತಿದ್ದ ಬೇಧಿ
  ಈಗಷ್ಟೇ ನಿಂತಿತು..!

* ಬೆವರು,ಸಮುದ್ರ,ಕಣ್ಣೀರು ಮತ್ತು ಮೂತ್ರ..
  ಎಲ್ಲೆಲ್ಲೂ ಉಪ್ಪೇ..
  ವ್ಯತ್ಯಾಸವನ್ನೇ ಮುಚ್ಚಿಹಾಕಬಲ್ಲ ಈ ಉಪ್ಪನ್ನು
  ನಾನಿನ್ನು ತಿನ್ನುವುದಿಲ್ಲ..!

* ದಿನಾ ಬೆಳಗ್ಗೆ ಯೋಗ ಮಾಡುವ ಅವನಿಗೆ
  ಪತಂಜಲಿಯ ಬಗ್ಗೆ ಕೇಳಿದರೆ
  ಪಕ್ಕದಮನೆ ಅಂಜಲಿ ನೆನಪಾಗ್ತಾಳೆ..
  ಆತ ಬೆಂಗಳೂರಿನ ಯುವಕ..!

Thursday, February 2, 2012

ಹಾಯ್ಕುಗಳು:

* ನೀನು ನನ್ನ ಬಾಳಿಗೆ ಬೆಳಕಾಗಿ ಬಂದಿದ್ದಕ್ಕಿಂತ
  ಈ ಟಾರ್ಚಿಗೆ ಶೆಲ್ಲಾಗಿ ಬಂದಿದ್ದರೆ ಚೆನ್ನಾಗಿರ್ತಿತ್ತು..
  ಕರೆಂಟ್ ಇಲ್ಲ ಇಲ್ಲಿ.. ಅರ್ಜೆಂಟ್ ಟಾಯ್ಲೆಟ್ಟಿಗೆ ಹೋಗಬೇಕು ನಾನು..!

* ಮನುಷ್ಯ ಬುದ್ಧಿಜೀವಿಯಾಗುವುದನ್ನು ಬಯಸದ ಜನರೆಂದರೆ
  hair dye ಕಂಪೆನಿಯ ಮಾಲೀಕರು..!

* ಇಂಕಿನ ಹನಿಯೊಂದು ಆಗಷ್ಟೇ ಜಾರಿಬಿದ್ದ ಘಳಿಗೆ.
  ಅಂತಿಂಥ ಸಂದರ್ಭವಲ್ಲ ಅದು..
  ವ್ಯಾಸ ಮಹಾಭಾರತಕ್ಕಿಟ್ಟ ಕೊನೆಯ Full stop ಹನಿ ಅದು..!!

* ಸತ್ಯ ಹೇಳದಿದ್ದರೆ ತಲೆ ಸಾವಿರ ಹೋಳಾಗುವುದು ಎಂದು
  ಆ ಬೇತಾಳ ಹೇಳಿದ ಒಂದೇ ಒಂದು ಸುಳ್ಳು..
 "ವಿಕ್ರಮಾದಿತ್ಯ-ಬೇತಾಳ" ಪುರಾಣವನ್ನೇ ಸೃಷ್ಟಿಸಿದ್ದು ಸೋಜಿಗ..!

* ನ್ಯಾಯಾಂಗಕ್ಕೂ ಮರ್ಮಾಂಗಕ್ಕೂ ಇರುವ ಹೋಲಿಕೆ..
  ಎರಡೂ ಕಡೆ V.I.P ಗಳದ್ದೇ ಕಾರುಬಾರು..!

* ಯಾಕೆ? ಏನು? ಎಲ್ಲಿ? ಹೇಗೆ?
  ಎನ್ನುವ ಪದಗಳು..
  ಮನುಷ್ಯಕುಲ ನಶಿಸಿದರೂ ಉತ್ತರವಾಗದೇ
  ಬರಿಯ ಪ್ರಶ್ನೆಗಳಾಗೇ ಉಳಿದು ಹೋಗುವುದು ಅತ್ಯಂತ ಘೋರ ಸಂಗತಿ..!

Tuesday, January 31, 2012

ನಮ್ಮನೆಯ ನಲ್ಲಿ

ಒಂದು ಸಂಶಯದೊಂದಿಗೆ
ನಲ್ಲಿ ತಿರುಪುತ್ತಿದ್ದೇನೆ..
ಮೊನ್ನೆ ಸಂಶಯವಿಲ್ಲದೇ ತಿರುಗಿಸಿದ್ದಕ್ಕೆ
ಮೂಳೆ ಮುರಿಸಿಕೊಂಡು ಮೂಲೆ ಗುಂಪಾಗಿತ್ತು
ಹಳೇ ನಲ್ಲಿ..!

ಈ ನಲ್ಲಿಯ ಬಾಳೇ ವಿಚಿತ್ರ..
ಮಾತಿಲ್ಲ,ಕಥೆಯಿಲ್ಲ,ಕಿವಿಯಿಲ್ಲ,ಕವಿಯಲ್ಲ.
ನಲ್ಲನಿಲ್ಲದ ನಲ್ಲಿಗೆ
ನಲ್ಲೆಯೂ ಇಲ್ಲ..
ತಿರುಪಿದಾಗ ಛಿಲ್ಲನೆ ಚೆಲ್ಲುವುದರಲ್ಲಿ ಕಮ್ಮಿಯಿಲ್ಲ.

ನಲ್ಲಿಯೊಂದು ಹಾದರಗಿತ್ತಿ..
ಗೊತ್ತಿದ್ದವನಿಗೂ ಸೈ,ಅಪರಿಚಿತನಿಗೂ ಸೈ..
ತಡವಿ,ಹಿಂಸಿಸಿ,ತಿರುಚಿ ಉಪಯೋಗಿಸಿದಷ್ಟೂ
ತಣಿಯುವವರು
ಲಿಂಗಬೇಧವಿಲ್ಲದ ಗಿರಾಕಿಗಳು..

ಮನೆಯ ಮುಂಜಿ,ಮದುವೆಯ ಮುಂಜಾವುಗಳಿಗೆ
ಪಕ್ಕದ ಬೀದಿ ಮಲ್ಲಿಯಿಲ್ಲದಿದ್ದರೂ
ಈ ನಲ್ಲಿ ಬೇಕೇ ಬೇಕು..
ಆದರೂ..
"ಬಾ ನಲ್ಲಿ ಮಧುಚಂದ್ರಕೆ.." ಎಂಬ ಹಾಡು
ಇಲ್ಲಿಯತನಕ ಬಂದಿಲ್ಲ..!

ನಲ್ಲಿ ತಿರುಪುವಾಗ ಇಷ್ಟೆಲ್ಲಾ ನೆನಪಾಗಿದ್ದಕ್ಕೆ
ಸಿಕ್ಕಿದ್ದು..
ಖಾಲಿಯಾದ ಟ್ಯಾಂಕು..
ಮತ್ತು ಕಾರ್ಪೊರೇಷನ್ ಕೂಗು ;
ಮುಂದಿನ ಮೂರು ದಿನ ನಗರದಲ್ಲಿ ನೀರಿರುವುದಿಲ್ಲ..!!

Sunday, January 29, 2012

ಓ ನನ್ನಮ್ಮನ ಸ್ಲಿಮ್ ಸೊಸೆಯೇ..

ಓ ನನ್ನಮ್ಮನ ಸ್ಲಿಮ್ ಸೊಸೆಯೇ..
ತಪ್ಪಿಯೂ ನಿನ್ನ ಸೊಂಟಕ್ಕೆ Tyre ಬರಿಸಿಕೊಳ್ಳದಿರು..!

ಬಹುಷಃ ಅಮ್ಮ ಯೋಗ ಮಾಡಲು ಕಲಿತಿದ್ದು
ನಿನ್ನ ಸಿಂಹಿಣಿ ನಡು ನೋಡಿಯೇ ಇರಬೆಕು..
ನಾನೊಮ್ಮೆ ಕದ್ದು ನೋಡಿದ್ದೆ.. ನನ್ನಮ್ಮ
ನಿನ್ನ ಸೊಂಟ ಕದ್ದು ನೋಡುವುದನ್ನ..!

ಅವತ್ತಿನಿಂದಲೇ ಇರಬೇಕು..
ಅಮ್ಮನ ಸೊಂಟ ಇಳಿದಿದ್ದರೂ
ನಿನ್ನ ಕಟಿಯೆಡೆಗಿನ ಕಳ್ಳನೋಟ,
ವ್ಯಾಯಾಮದೆಡೆಗಿನ ಸಾಧಕ ನೋಟ
ಏರುತ್ತಲೇ ಹೋಗಿದ್ದು..!

ಇತ್ತ ನಂಗೂ,ಅಪ್ಪನಿಗೂ ಅಲ್ಲಲ್ಲೇ ಮುಸಿನಗು..
ಏಕೆಂದರೆ..
ತೆಳು ಸೊಂಟದಾಸೆಯಿಂದ ಮನೆಕೆಲಸವನ್ನೆಲ್ಲಾ
ನಿನಗೆ ಹಚ್ಚದೇ ತಾನೊಬ್ಬಳೇ
ಮಾಡಿ ಮುಗಿಸುತ್ತೇನೆಂಬ ಹಠ ಅಮ್ಮನದು..!

ಹೀಗೇ ದಿನವಿಡೀ ದುಡಿದು,
ಯೋಗ,ಅಭ್ಯಂಜನಾದಿಗಳನ್ನು ಬಿಡುವಿರದೇ
ಕಡಿದು ಗುಡ್ಡೆ ಹಾಕಿದ್ದಕ್ಕೆ..
ಅಮ್ಮನಿಗೆ ಸಿಕ್ಕ ಫಲ..
ಸೊಂಟ ಒಂದು Round ಕಮ್ಮಿಯಾಗಿದ್ದು..!
ನನ್ನಪ್ಪನ ಮುದ್ದು ಡುಮ್ಮಿ ಕೊನೆಗೂ ಸುಮ್ಮನಾಗಿದ್ದು..!

ಆದರೆ.. ಪಟ್ಟ ಅನಾವಶ್ಯಕ ಕಷ್ಟಕ್ಕೆ
ಜ್ವರ,ಬಳಲಿಕೆಯಿಂದ ನರಳಿ,
ಹಾಸಿಗೆ ಹಿಡಿದಾಕೆ Recover
ಆದ ತಕ್ಷಣ.. ಕಾಫಿ ಮಾಡುವಾಗ
ನನ್ನೊಬ್ಬನನ್ನೇ ಅಂತ್ಯಾಕ್ಷರಿಗೆ ಕರೆದು ಮೊದಲು
ಶುರು ಮಾಡಿದ ಹಾಡು..

ಸೊಂಟದ ವಿಷ್ಯ.. ಬ್ಯಾಡವೋ ವಿಶ್ವ..!!

Friday, January 27, 2012

ಜಾತ್ಯಾತೀತ

ಇಲ್ಲೊಬ್ಬ ಮನುಷ್ಯನಿದ್ದಾನೆ..
ಹುಟ್ಟಿದಾಗ ಎಲ್ಲರಂತೆ ಮಗು..
ಜನಿಸಿದ್ದು ನಕ್ಷತ್ರದಲ್ಲೋ,ಉಲ್ಕೆಯಲ್ಲೋ,
ಉಪಗ್ರಹದಲ್ಲೋ.. ಮಗುವಿದ್ದಾಗ
ಗೊತ್ತಿರಲಿಲ್ಲ ಅವನಿಗೆ..

ಹೀಗೇ ದೊಡ್ಡವನಾಗುತ್ತಾ
ಕೈ ಕಾಲು ಕೆಸರು ಮಾಡಿಸಿ..
ಕೊನೆಗೊಂದಿನ ಹೆಣ್ಣು ಬಸಿರಾಗುವ ಬಗ್ಗೆಯೂ ತಿಳಿಸಿ
ಬೆಳೆಸಿಬಿಟ್ಟಿತು ಸಮಾಜ..!

ಆದರೆ

ಹೆತ್ತ ತಾಯಿಯಲ್ಲಿ,
ಮುತ್ತಿಕ್ಕಿದ ಗೆಳತಿಯಲ್ಲಿ
ಒಂದೇ ಪ್ರೀತಿ ತೋರಿಸಿದ ಸಮಾಜ..
ಒಂದೇ ಜಾತಿ ತೋರಿಸಲಿಲ್ಲ.

ತನ್ನಪ್ಪನಾಕೆಯನ್ನು ಒಪ್ಪಿಕೊಂಡ ಜಾತಿ
ತನ್ನಾಕೆಯನ್ನು ಒಪ್ಪಲಿಲ್ಲ..
ಕಿಡಿ ಕಾಡ್ಗಿಚ್ಚಾಗಿದ್ದು ಆಗಲೇ..
ಬೆಳಗ್ಗೆ ಸಂಧ್ಯಾವಂದನೆ ಮಾಡಿ
ಸಂಜೆ ಕುರಿ ಕಾಯಲು ತೊಡಗಿದನಾತ..!

ಪರಶಿವನ ಪತ್ನಿಗೆ ಪರ್ವೀನಾ
ಎಂದು ಹೆಸರಿಟ್ಟ..!
ಕತ್ತಿನ ಶಿಲುಬೆ ಒಂದಿನವೂ ಚುಚ್ಚಲಿಲ್ಲ..
ಒಂದು ರಾಹುಕಾಲದಲ್ಲಿ
ತನ್ನಮ್ಮನಿಗೆ ತನ್ನಾಕೆಯನ್ನು ಪರಿಚಯಿಸಿ,
ಜಾತಿ ಬಿಡದೇ,
ಜನತಾದಳಕ್ಕೂ ಸೇರದೇ..
ಜಾತ್ಯಾತೀತನಾದ..!

ಇಲ್ಲಿ ಅದೇ ಮನುಷ್ಯನಿದ್ದಾನೆ..
ಬಹುಷಃ ಅದು ನಾನೇ ಆಗಿದ್ದೇನೆ..!

Tuesday, January 24, 2012

ಇದರೆದುರ್ಯಾವ ಮಾತು..!?

ಇಪ್ಪತ್ತೆರಡು ವರ್ಷಕ್ಕೇ
ನೆನಪುಗಳ ಮೆಲುಕು ಮೆಲ್ಲುವ
ಮನಸಿನ ಚಟಕ್ಕೆ..
ಸಂಭ್ರಮಿಸಲೋ? ತಲೆ ಕೆಟ್ಟು ಕೂರಲೋ?

ಅಷ್ಟಕ್ಕೂ ಇಷ್ಟು ಪರ್ವಗಳಲ್ಲಿ ಆಗಿದ್ದಾದರೂ ಏನು?
ಮೈ ನೆಂದಿದ್ದು,ಬೆವರಿದ್ದು,
ಶಾಲೆಗೆ ಹೋಗದಿರಲು ಭಗೀರಥ ಪ್ರಯತ್ನ ಮಾಡಿದ್ದು..
ಕಂತ್ರಿ ನಾಯಿ ಸಾಕಿದ್ದು..
ಮತ್ತು ಮೀಸೆ ಮೂಡುವ ಮುನ್ನವೇ ಪೆನ್ನಿನಲ್ಲಿ ಚಿಗುರಿಸಿಕೊಂಡಿದ್ದು..!

ಕಣ್ಣ ಮುಂದೆ ಠುಸ್ಸೆಂದ ಪಟಾಕಿ
ಕಾಲ ಬಳಿ ಢಂ ಎಂದಿತ್ತು..!
ಅವತ್ತು ಅಪ್ಪ ಕೊಟ್ಟ ಹೊಡೆತ ಕೊನೆಯದೆಂದು
ಮೊದಲೇ ತಿಳಿದಿದ್ದರೆ..
ಮನೆಯಲ್ಲಿ ಹಟ ಮಾಡಿ ಪಾಯಸ ಮಾಡಿಸುತ್ತಿದ್ದೆ..!!

ಒಡೆದ ಕಾಲಿಗೆ ಮುಲಾಮು ಮೆತ್ತಿದ್ದೆ,
ಗಡ್ಡ ಬಂದಾಗೆ ಕೇಕೆ ಹಾಕಿದ್ದೆ..!
ಮರುದಿನದ ಬಿಸಿಲಿಗೆ ತಲೆಯಲ್ಲೊಂದು
ಬೆಳ್ಳಿಕೇಶ ಕೋರೈಸಿದಾಗ ಕಣ್ಣಲ್ಲಿ ರಕ್ತ ಸುರಿಸಿದ್ದೆ..!
ವಂಶಪಾರಂಪರ್ಯವೋ,ಸೋಪಿನ ಕೆಮಿಕಲ್ಲೋ..ಏನಾದರೂ
ಆಗ ನಂಗಿನ್ನೂ ಹದಿನೈದು..
ಮೇಲಾಗಿ
ಎದುರುಮನೆ ಜೀಜಿಂಬೆ, ಹುಡುಗಿಯಾಗಿ ಎದುರು ಕಾಣೋ ವಯಸ್ಸು..!!

ಅಲ್ಲಿಂದಿಲ್ಲಿಗೆ ಬದುಕು
ಸೂರ್ಯನ ಏಳು ಕುದುರೆಗಳ ಓಟ..
ಏಳು ವಸಂತಗಳ ಆಟ,ತಾಕಲಾಟ,ಪೀಕಲಾಟ,ದೊಂಬರಾಟ..
ಗೊಬ್ಬರ ಒಂದು ಬಿಟ್ಟು
ಸುಖ,ನೋವು,ಮಳೆ,ಉಲ್ಲಾಸ,
ಹುಡುಗಿ ಬಿಟ್ಟು ಹೋದ ಗಾಯ..
ಅಷ್ಟನ್ನೂ ಹಸಿ ಹಸಿಯಾಗಿ ತಿಂದು ಕೂತಿದೆ ಮನಸು..

ಮತ್ತದೇ ಪ್ರಶ್ನೆ..

ಸಂಭ್ರಮಿಸಲೋ? ತಲೆ ಕೆಟ್ಟು ಕೂರಲೋ?

Saturday, January 21, 2012

ನೀಲಿ ನಿರೀಕ್ಷೆ

ನಾ ಕೊಟ್ಟ ನೀಲಿ ಸೀರೆಗೆ
ಸೆಂಟು ತಾಗಿಸಬೇಡ..
ನಿನ್ನ ಮೈಗಂಧವೇ ಚಂದ..
ಆ ಘಮಕ್ಕೆ ಪಲ್ಲು ಜಾರೀತು ಜೋಕೆ..!

ಅದೆಷ್ಟು ಒಪ್ಪವಾಗಿ ನೇಯುತ್ತೀಯ ನೆರಿಗೆಯನ್ನ..
ನಾಜೂಕು ರಾಣಿ..
ನನ್ನ ಇಸ್ತ್ರಿ ಮಾಡಿದ ಪ್ಯಾಂಟೂ ಅದರ ಮುಂದೆ
ಮಾಸಲು ಗೋಣಿ..!

ನಾನೇ ಹೊಲಿಸಿದ ಬ್ಲೌಸು
ನಿಂಗೆ ಸರಿಯಾಗುತ್ತೋ ಇಲ್ಲವೋ
ಎಂಬ ಅನುಮಾನ..
ಕನಸಲ್ಲೂ ಕದ್ದು ನೋಡಲಿಲ್ಲವಲ್ಲ
ನಿನ್ನೆದೆಯನ್ನ..!
ಕಾಮವಿಲ್ಲದ ಪ್ರೀತಿ
ಕಾವಿ ತೊಟ್ಟ ಯೋಗಿಯಷ್ಟೇ ಪವಿತ್ರ ಹುಡುಗೀ..!!

ಆದರೆ..

ಯೋಗಿಗೂ ಹಸಿವೆಯಾದಾಗ
ಹಣ್ಣು ತಿನ್ನುವ ಹಂಬಲವಿರುತ್ತದೆ..
ಸಂಬಂಧವೇ ಇಲ್ಲದ ಈ ನೆಪದಲ್ಲಾದರೂ
ಒಮ್ಮೆ ಸೀರೆಯುಡಿಸುವುದ ಕಲಿಸೇ ಹುಡುಗೀ..
ದೇವರಾಣೆ ಕಣ್ಮುಚ್ಚಿಕೊಳ್ಳುತ್ತೇನೆ..!

ನಿರೀಕ್ಷೆಯಲ್ಲಿ...

Thursday, January 19, 2012

ಮರಳ ಗಾಳ

ದಿನವೂ ಮೀನು ಹಿಡಿಯಲು ಹೋಗುತ್ತಾರೆ ಅವರು..
ಸಂಸಾರಕ್ಕೆ ದೇವರಂತೆ,
ಮತ್ಸ್ಯಕುಲಕ್ಕೆ ದೆವ್ವದಂತೆ..
ಬೇರೆ ಬೇರೆ ಪಾತ್ರಗಳಿಗೆ ರಂಗವಿಲ್ಲದೇ,
ಮುಖವಾಡವಿಲ್ಲದೇ ಬಣ್ಣ ಹಚ್ಚುವ ಬೆವರ ಪುತ್ರರವರು..

ಸಾಗರವೆಂದರೆ ಸೋಜಿಗವಲ್ಲ ಅವರಿಗೆ..
ಬರೀ ನೀಲಿ,ಸೂರ್ಯನಿದ್ದರೆ ಕೊಂಚ ಕಿತ್ತಳೆ.
ಹಾಯಿಗಳ ಬಾಯಿಗೆ ಗಾಳಿಯ ಬೆಣ್ಣೆ ಮೆತ್ತಿಸುತ್ತಾ
ದಿನವೂ ಮೀನು ಹಿಡಿಯಲು ಹೋಗುತ್ತಾರೆ ಅವರು.

ಅಲೆಯಲ್ಲಾದರೂ ಹಾಕಿಸು
ಸುಳಿಯಲ್ಲಾದರೂ ಹಾಕಿಸು
ಮೀನು ಬೀಳುವ ಹಾಗೆ ಬಲೆ ಹಾಕಿಸು ರಾಘವೇಂದ್ರಾ..
ಎಂದು ದೇವರ ಬೇಡಿ,ಮರಳ ಗೋಪೀಚಂದನವ ತೀಡಿ
ಪ್ರತಿದಿನವೂ ಮೀನು ಹಿಡಿಯಲು ಹೋಗುತ್ತಾರೆ ಅವರು.

ಅದೊಂದು ದಿನ ಬಂದ ಡೊಡ್ಡಲೆಯ ಸುನಾಮಿ
ಬೇನಾಮಿ ಆಸ್ತಿಯಿಲ್ಲದ ಜನರ
ಗುಳೆ ಹೋಗಲೂ ಆಗದಂತೆ ನುಂಗಿಬಿಟ್ಟಿತು..
ಸಾಗರದಂಚು ಸ್ಮಶಾನವಾಯಿತು.
ದೇಹಗಳು ಕಡಲಮ್ಮನಿಗೆ ಹಾರವಾದವು..

ಸತ್ತವರಿಗೆ ಚಟ್ಟ ಕಟ್ಟುವವರೂ ಸತ್ತಪರಿ ಕಂಡು
ಮಮ್ಮಲ ಮರುಗಿತ್ತು ಮೊದಲಲ್ಲಿದ್ದ ಇಂದ್ರಪುರಿ..

ಅಳಿದುಳಿದವರು ಗಳಿಸಿದ್ದು ಕಳೆದು,
ರಾತ್ರಿ ಹಗಲಾಗಿ,
ಹಗಲು ರಾತ್ರಿಯಾದಂತೆ
ಮತ್ತೆ ಹಗಲಾದಾಗ
ಹೊಟ್ಟೆಗೊಂದಷ್ಟು ಹಿಟ್ಟಿಗೆ
ಅಂದೂ ಮೀನು ಹಿಡಿಯಲು ಹೋದರು ಅವರು..
ಅನಿವಾರ್ಯತೆಯ ಹುಟ್ಟು ಹಾಕುತ್ತಾ..

ನೀನಿರಬೇಕಿತ್ತು ಇಲ್ಲಿ..

ನೀನಿರಬೇಕಿತ್ತು ಇಲ್ಲಿ..
ಇಲ್ಲೇ ಹತ್ತಿರದಲ್ಲಿ..
ಅಪ್ಪಿ ಕುಳಿತ ಬಿರುಸಿಗೆ ಮಧ್ಯ ಸುಳಿದ ಸೊಳ್ಳೆಯೊಂದು
ಕೊನೆಯುಸಿರೆಳೆಯಲೂ ಗಾಳಿಯಿಲ್ಲದಷ್ಟು ಹತ್ತಿರ..!

ಅವತ್ತೊಂದಷ್ಟು ದಿನ..
ಅದೇ ನಮ್ಮ ಕಣ್ಣುಸನ್ನೆಗಳು ಕೊನೆಗೊಂಡ ದಿನ..
ನಾನು ಸ್ನಾನ ಮಾಡಿದ್ದರೂ ಅದೆಷ್ಟು ದೂರವಿದ್ದೆ ನೀನು..
ನೀನೇ ನಿಜವಾದ ಕೊಳಕಿ ಅನ್ನಿಸಿಬಿಟ್ಟಿತ್ತು..!

ಎತ್ತರೆತ್ತರದ ಮೇರುಪರ್ವತ ಹತ್ತಿ
ಮೇರೆ ಮೀರಬೇಕಿತ್ತು ನಾವು..
ಪುಟ್ಟ ಪಾದದ ಹಂಸ ನೀನು..
ಹತ್ತಿಯ ಹಾಗೆ ಹೊತ್ತೊಯ್ಯುತ್ತಿದ್ದೆ ನಿನ್ನ.
ತುದಿ ತಲುಪುವ ತನಕ ರೆಪ್ಪೆ ತೆರೆಯಬಾರದಿತ್ತು ನೀನು..

ಹಬ್ಬದ ಹೋಳಿಗೆಯೂ ನಿನ್ನ ಮುಂದೆ
ಸಪ್ಪೆ ಸಪ್ಪೆಯಾಗಿತ್ತು.
ನೀನು ಹುಬ್ಬು ಗಂಟಿಕ್ಕಿದರೂ ಅದೊಂದು
ಪ್ರಣತಿಯಲ್ಲಿನ ಬತ್ತಿಯ ಹಾಗೆ.
ದೀಪದ ಚೆಲುವಿಗೆ ನಿನ್ನ ಬಟ್ಟಲು ಕಂಗಳೇ ಉಪಮೆಯಾಗಿತ್ತು.

ಇಂಥ ನೀನು..
ನೀನಿರಬೇಕಿತ್ತು ಇಲ್ಲಿ..
ಇಲ್ಲೇ ಹತ್ತಿರದಲ್ಲಿ.
ನನಗಿಂತ ಮೊದಲು ಚಿತೆಯೇರಲು
ಯಾರಪ್ಪನ ಅಪ್ಪಣೆ ಪಡೆದೆ?
ನನ್ನಪ್ಪುಗೆಯಲ್ಲಿ ತಪ್ಪಿದ್ದಿತಾ??

ಕೊನೆಯದಾಗಿ ನೀನಂದು
ಅರ್ಧ ಹಚ್ಚಿದ್ದ ಕಪ್ಪು ಕಾಡಿಗೆಯೊಂದೇ
ನನ್ನ ನೂರು ಜನ್ಮದ ಆಸ್ತಿಯಾಗಿಹೋದ ದುರಂತ
ಭೂಮಿಯಲ್ಲಿ ಮತ್ತೆಂದೂ ಮರುಕಳಿಸದಿರಲಿ... :(

Wednesday, January 18, 2012

ವೃಕ್ಷ ಚರಿತ್ರ

ಮಳೆಹನಿಯೊಂದು ಫಕ್ಕನೆ
ಮಣ್ಣು ಚುಂಬಿಸಿತು..
ಒಳಗಿದ್ದ ಬೀಜ ಮಲಗಿದಲ್ಲೇ
ಮಗ್ಗಲು ಬದಲಿಸಿತು..

ಮರುದಿನದ ಬಿಸಿಲು ಹೊತ್ತು ತಂದಿದ್ದು
ಬೀಜದ ಮಗುವಿನಂಥ ಕುಡಿ..
ನಾಯಿ ಕೆರೆಯಲಿಲ್ಲ,
ಬೆಕ್ಕು ತೋಡಲಿಲ್ಲ..
ಗದ್ದೆಯ ಗಂಡಾಳಿನ ಕಾಲು ಅದೃಷ್ಟಕ್ಕೆ
ಪಕ್ಕದಲ್ಲೇ ಹಾದು ಹೋಯಿತು..

ಕುಡಿ ಗಿಡವಾಯಿತು..
ಸಿಕ್ಕಿದ್ದು ಹಕ್ಕಿ,ಜಾನುವಾರುಗಳ ಒಡಲ ವಾರಾನ್ನ..
ಬೆಳೆಯಿತು..
ಬೆಳೆದು ಯೌವ್ವನ ತಲುಪಿತು;
ಅಂದುಕೊಂಡಂತೆ ಬದುಕು ಸಾಗುತ್ತಿಲ್ಲವಲ್ಲಾ ಎಂಬ ಚಿಂತೆಯೊಂದಿಗೆ.

ಗಿಡದ ಹೆಸರು ಮರವಾಗಿ ಬದಲಾಯಿತು..
ಅನ್ನ ನೀಡಿದ್ದ ಹಕ್ಕಿಗಳಿಗೆ ಗೂಡು ನೀಡಿತು..
ಜಾನುವಾರುಗಳಿಗೆ ಅನ್ನವಾಯಿತು..
ಆದರೂ ಮತ್ತದೇ ಚಿಂತೆ.

ಅದೊಂದು ದಿನ ಆತ ಬಂದ..
ಆ ಮರದ ನೆರಳಿಗೆ ಮುಖ ಒಡ್ಡಿದ..
ಆಹಾ.. ಮನಸಿಗೆ ಎಂಥಾ ಶಾಂತಿ..
ಒಹ್ ಶಾಂತಿ..!! ಅದೇ..
ಅದೊಂದನ್ನೇ ಆತ ಜಗತ್ತಿಗೆ ಪರಿಚಯಿಸಿದ..
ಅವನು ಬುದ್ಧ..!

ಪರಿಣಾಮ..

ಮರದ ಹೆಸರು ಬೋಧಿಯಾಗಿ ಬದಲಾಯಿತು..
ಶಾಶ್ವತ ಶಾಂತಿಯ ಹರಿಕಾರನಾಯಿತು..
ಅಂದುಕೊಳ್ಳದ ರೀತಿಯಲ್ಲಿ ಬದುಕು ಬದಲಾಗಿಹೋಯಿತಲ್ಲಾ
ಎಂದುಕೊಳ್ಳುವಷ್ಟರಲ್ಲಿ..

ಫಕ್ಕನೆ ಮತ್ತೆಲ್ಲೋ ಹನಿಯೊಂದು
ಮಣ್ಣು ಚುಂಬಿಸಿತು..
ಭೂಮಿಯ ಅದೃಷ್ಟ ಕೈಕೊಟ್ಟ ಘಳಿಗೆ ಅದು..
ಮತ್ತೊಬ್ಬ ಬುದ್ಧ ಹುಟ್ಟಿಬರಲೇ ಇಲ್ಲ..
ಹುಟ್ಟಿಬರಲೇ ಇಲ್ಲ..

Monday, January 16, 2012

ಬದುಕಿನ ಚಿತ್ತು-ಕಾಟುಗಳು

ಕಾಮನಬಿಲ್ಲಿನ ಮನದೊಳಗೆ
ಕಪ್ಪು ಬಿಳುಪು ನೆನಪುಗಳು..
ಕಲ್ಪವೃಕ್ಷದ ಕಣ್ಣೊಳಗೆ
ಯಾರಿಗೂ ಹೇಳದ ಬಯಕೆಗಳು..

ಕಡಲಿನ ಕಪ್ಪೆಯ ಚಿಪ್ಪೊಳಗೆ
ಮೂಡದೆ ಮಡಿದ ಮುತ್ತುಗಳು..
ಕಾಲನ ಕಾಲಿಗೆ ಬಿದ್ದರು ಕೂಡಾ
ಉಳಿಯದೆ ತೀರಿದ ಜೀವಗಳು..

ಮಂದ್ರ ಷಡ್ಜದ ಹಂಗೊಳಗೆ
ಬಂಧನಗೊಂಡ ರಾಗಗಳು..
ಲಂಕೆಯಂಥ ನರಕದ ನಡುವೆಯೂ
ದ್ವಾರಕೆಯಂಥ ಜಾಗಗಳು..

ಕಾಡಿನ ಕೊನೆಯ ಮರದಲಿ ಅಡಗಿದ
ಆಡು ಮುಟ್ಟದ ಸೊಪ್ಪುಗಳು..
ಮರೆತೇನೆಂದರೂ ಮರೆಯಲಿ ಹೇಗೆ 
ನನ್ನನು ಆಳಿದ ತಪ್ಪುಗಳು..

ಹುಟ್ಟುಕುರುಡನ ಕಣ್ಣುಗಳಲ್ಲಿ
ಸಾವಿರ ಬಣ್ಣದ ಚಿತ್ರಗಳು..
ನಮ್ಮದೇ ಬದುಕಿನ ತೀರಗಳಲ್ಲಿ
ಮಹಾಭಾರತದ ಪಾತ್ರಗಳು..

ಹಿಡಿಯಲು ಸಿಗದೇ ಬೇಡವೆಂದರೂ
ಮುಗಿದ ಬಾಲ್ಯದ ಪರ್ವಗಳು..
ಬರೆಯಲು ಹೋದರೆ ಮುಗಿಯದೆ ಹೋಗುವ
ಇಂತಹ ನೂರು ಭಾವಗಳು..

ಬತ್ತಿಯಿಲ್ಲದ ಪ್ರಣತಿ ನಾನು

ಮುಂದುವರೆದಿದೆ ನಡಿಗೆ..
ಜಾರುವ ಗೂಡಿನೆಡೆಗೋ,
ಹಾರುವ ಮಾಡಿನೆಡೆಗೋ..
ಬೇಡವಾಗಿದೆ ಜಿಜ್ನಾಸೆ..

ಒಂದೊಂದು ಸಂತಸದ ಕಾರ್ಡುಗಳಿಗೂ
ನೂರು ಬೇಸರಗಳ ಸ್ಟಾಂಪು.
ಜೀವನದ ಟಪಾಲು
ಪಾಲು ಮಾಡದೇ ಪಾಲ್ಗೊಳ್ಳುತ್ತಿದೆ..
ತುಂಬಿಕೊಂಡು ಖಾಲಿಯಾಗುತ್ತಾ..

ಕವಡೆ ಕೊಳ್ಳಲು ಕಾಸಿಲ್ಲದಿದ್ದರೂ
ಕೈಗಳು ಖಾಲಿಯಾಗಿಲ್ಲ..
ರೇಖೆಗಳಿನ್ನೂ ಇವೆ :
ಭವಿಷ್ಯದ ದಾರಿಗಳಂತೆ..!

ದೇವರಿಗಾಗಿನ ಬದುಕು
ದೇವರದ್ದೇ ಇಲ್ಲವೇ?
ಪಕಳೆಯಿಲ್ಲದ ಪಾರಿಜಾತ ನಾನು..
ದಾರಿಯಿಲ್ಲ
ನನ್ನ ಬದುಕು ನನ್ನದೇ..

ಖಾಯಿಲೆ ಕಣ್ಣಿನ ಮನಸಿಗೆ
ಹಾಸಿಕೊಳ್ಳಲು ಚಾದರವೂ ಇಲ್ಲ..
ಹಾದರವೆಲ್ಲಿಯ ಮಾತು?!
ಅಜೀರ್ಣದ ಅನುಭೂತಿ
ಕನಸುಗಳಲ್ಲೂ ತೇಗುತ್ತಿದೆ..

ಜೇಬಿನಲ್ಲಿನ ಚಡಪಡಿಕೆಗಳಿಗೆ
ಬ್ಯಾಗಲ್ಲ.. ಬ್ಯಾಂಕೂ ಸಣ್ಣದೇ..
ಗಾಡಿಯವನ ದೋಸೆಯಂತೆ ತೂತಾಗಬೇಕಿದೆ ಜೇಬು..
ಬೆಲೆ ಬರಬೇಕಿದೆ ಬದುಕಿನ ಸ್ಟಾಂಪಿಲ್ಲದ ಕಾರ್ಡುಗಳಿಗೆ..
ಮುಂದುವರೆಯಬೇಕಿದೆ ನಡಿಗೆ..
ಹಾರುವ ಮಾಡಿನೆಡೆಗೆ..

ಸುಕ್ಕುಗಟ್ಟಿದ ಭಾವಗಳು

ತಿಂಗಳುಗಳಿಂದ ನೀರು ಮುಟ್ಟಿಸದ
ಪ್ಯಾಂಟಿನ ತೊಡೆಯಲ್ಲಿ ಸಣ್ಣದೊಂದು ತೂತು ಬಿದ್ದಿದೆ..
ಸ್ನಾನದ ಟವೆಲ್ಲೂ ಮಣ್ಣಾಗಿದೆ,
ಅದಕ್ಕೂ ನೀರಡಿಕೆ ಪಾಪ..!

ಯಾವತ್ತೋ ಕುಡಿದು ತೇಗಿದ ಮೇಲೆ
ಸ್ಪ್ರೈಟ್ ಬಾಟಲಿಯೇನು ನಾಯಿ ಮುಟ್ಟಿದ ಮಡಕೆಯಾಗಿಲ್ಲ..
ಬಳಕೆಯಾಗುತ್ತಿದೆ ಇಂದಿಗೂ,
ತನ್ನ ಬಣ್ಣಗೆಟ್ಟ ದೇಹದೊಳಗೆ ಬೋರು ನೀರು ತುಂಬಿಸಿಕೊಂಡು..

ಕಾಲಚಕ್ರದ ಪಥದಲ್ಲಿ ಅಂಡೂರಿಕೊಂಡು
ಕೂತಿದ್ದು ಮಾಸಲು ಗೋಡೆಯ ಕ್ಯಾಲೆಂಡರು..
ಡೇಟು ತಿರುಗಿಸಿ ತಿಂಗಳುಗಳು ಸೋರಿವೆ..
ಅದರ ಪಾಲಿಗಿನ್ನೂ ಯುಗಾದಿ ಜಾರಿಯಲ್ಲಿದೆ..!

ಕಳೆದ ರಾತ್ರಿಯ ಮದಿರೆಯ ಗುಂಗಿಗೆ
ಬೆಳಗ್ಗೆ ತಲೆಕೆಟ್ಟು ಕುಡಿದ ಅರ್ಧ ಲೀಟರ್
ನಂದಿನಿ ಮೊಸರಿನ ಪ್ಯಾಕೆಟ್ಟು
ಹಾಗೇ ಬಿದ್ದಿದೆ,ಮುತ್ತಿದಿರುವೆಗಳ ಮಧ್ಯೆ..

ಅಲ್ಲೆಲ್ಲೋ ಮುರುಟಿದ ಗಂಧವತಿ ಸಾಕ್ಸಿನ ಮಧ್ಯೆ
ಸೊಂಟ ಮುರಿದು ಬಿದ್ದ ಪೊರಕೆಯಲ್ಲಿರುವ
ಕಸ ತೆಗೆಯಲು ಹೊಸ ಮಂಕಿ ಬ್ರಾಂಡ್ ಬೇಕು..
ಆ ಮಟ್ಟಿನ ಶುಭ್ರತೆ ಇಲ್ಲಿ..,ಇಲ್ಲ..!

ಚೊಂಬಿಗೇನಾದರೂ ಮೂಗಿದ್ದಿದ್ದರೆ
ಉಸಿರು ಕಟ್ಟಿ ಸಾಯುತ್ತಿತ್ತು..
ನನ್ನ ಚಂದದ(!?) ಬಚ್ಚಲ ಕುರುಕ್ಷೇತ್ರದಲ್ಲಿ
ಬೆದರಿದ ಪಾಂಚಾಲಿಯಾಗಿದೆ ಅದು..!

ಇದ್ದ ಕೆಲಸ ಬಿಟ್ಟಾಯಿತು,
ನಲ್ಲಿ,ಬುದ್ಧ,ಚಪ್ಪಲಿಗಳು ಕವನಗಳಾದವು..
ಏಗ್ದಾಗೆಲ್ಲಾ ಐತೆ.. ಏಗಲು ಮೂಡು ಬರುವ ತನಕದ
ಬೇಜಾರು ಗೀತೆಗೆ ಭಾನ್ಸುರಿ ನುಡಿಸುತ್ತಿವೆ
ಈ "ನನ್ನ ರೂಮಿನ ಪಾತ್ರಗಳು"..
ಪಕ್ಕದಲ್ಲೊಂದು ಪವಿತ್ರ ಪುಸ್ತಕ "ಮಲೆನಾಡಿನ ಚಿತ್ರಗಳು"..

ಒಂದೇ ಒಂದು ಮುತ್ತಿನ ಕಥೆ

ಕಷ್ಟಪಡಬೇಕು ಕಾಂಚನಾ..!
ಮುತ್ತೆಂಬುದು ಸಿನಿಕರ ಸ್ವತ್ತಲ್ಲ..
ಧನಿಕರ ಗತ್ತಲ್ಲ..
ಕತ್ತಲಿಗೆ ಮಾತ್ರ ಒದಗುವ ಗುಟ್ಟಲ್ಲ..
ತುಟಿಯೆಡೆಗೆ ಬಾಗಲೂ ಕಷ್ಟಪಡಬೇಕು ಕಾಂಚನಾ..!

ಇವೆಲ್ಲಾ ಗೊತ್ತಿರಬೇಕು ಕಾಂಚನಾ :
ಫ್ರೆಂಚರು,ಸವಿಜೇನು,ದಂತಭಗ್ನತೆ..
'ಅನುಭವ'ದ ಮುಂದೆ ಓದು,ದೇಶಸುತ್ತು
ಮುಂತಾದವು ಮಕಾಡೆ..!
ನಿಂಗಿವೆಲ್ಲಾ ಗೊತ್ತಿರಬೇಕು ಕಾಂಚನಾ..

ಆದ್ರೆ ನೀನ್ಯಾಕೆ ಹೀಗೆ ಕಾಂಚನಾ?
'ಮಧು'ವೆಂದರೆ ಬರಿ ಹೆಸರಲ್ಲ,
ದುಂಬಿಯೆಂದರೆ ಬರಿ ಹುಳುವಲ್ಲ..
ವಿವರಿಸಲು ನನಗೆ ಟೈಮಿಲ್ಲ..
ಆ ಕಿವಿಯಲ್ಲಿ ಹೇಳುವ ಮುಗ್ಧ ಮನ್ಮಥ ನಾನು..
ಈ ಕಿವಿಯಲ್ಲಿ ಬಿಡುವ ಸೋಂಬೇರಿ ಸುಂದರಿ ನೀನು..!
ನೀನ್ಯಾಕೆ ಹೀಗೆ ಕಾಂಚನಾ?

ಒಮ್ಮೆ ಹೀಗೆ ಮಾಡು ಕಾಂಚನಾ..
ತುಟಿಯಲ್ಲಿ ಕಾಮ ಕಂಡರೆ ಶಪಿಸಿಬಿಡು
ತುಟಿ ಒಡೆದಿದ್ದರೆ ಕ್ಷಮಿಸಿಬಿಡು..!
ಚಪ್ಪಲಿಯೇಟು ಚಪ್ಪಲಿಯಲ್ಲೇ ಸವೆಯಲಿ..
ಅಪ್ಪುಗೆಯ ಸವಿ ಮುಂದಿನ ಕವನಕ್ಕಿರಲಿ..!
ಜಾತ್ರೆ,ಜೋಗ,ಜಾನುವಾರುಗಳಿರಲಿ..
ನೀನೇ ನನ್ನಪ್ಪಿ ಮುತ್ತಿಟ್ಟುಬಿಡು..
ಜನಿವಾರದಾಣೆ ಜಿತೇಂದ್ರಿಯನಾಗುತ್ತೇನೆ..!!

ಬಿಟ್ಟು ಹೋಗದ ಮುನಿಸು

ದೀಪದಾ ಮಡಿಲಿನಲಿ
ತುಂಬಿ ಹರಿದ ಇರುಳು ಇದು..
ಬತ್ತಿಯ ಜೊತೆಯ ಸಲ್ಲಾಪ ಮರೆತು
ಬೆಳಕೊಮ್ಮೆ ಇಣುಕಬಾರದೇ ಇಲ್ಲಿ?

ಜಾತ್ರೆಯಾಗಿದೆ ಮನಸು
ಬೆಂಡು ಬತ್ತಾಸುಗಳ ಕಹಿಯೊಂದಿಗೆ..
ಒಡೆದ ಆಟಿಕೆಯಂಥ ಧಮನಿಯನ್ನು
ನಿನ್ನೊಲವೊಮ್ಮೆ ಜೋಡಿಸಲಾಗದೇ ಇಲ್ಲಿ?

ಕೂಗಿ ಹೇಳುವ ಬಯಕೆ..
ಮುನ್ನುಡಿಯಾಗು ನನ್ನ ಶೀರ್ಷಿಕೆಗಾದರೂ..
ಕೊನೆಯ ಪುಟದ ನನ್ನ ಕೊನೆಯಕ್ಷರಕ್ಕೆ
ಶಾಯಿಯೂ ಆಗಲಿಲ್ಲವಲ್ಲ ನೀ ಇಲ್ಲಿ..

ಗೋರಿಯೂ ಕೊನೆಯೇ.. ಭಸ್ಮವೂ ಕೊನೆಯೇ..
ಲೀನವಾಗುವಾಗ ಪ್ರಾಣ ತರಬಲ್ಲದೇ ಪ್ರೀತಿ?
ಅಂತೂ..
ನನ್ನಂತಿಮಕ್ಕೂ ಅರ್ಥ ಸತ್ತಿತು ಇಲ್ಲಿ..
ನಿನ್ನ ಕೊಂಚ ಪ್ರೀತಿಯೂ ಇಲ್ಲದ ಇಲ್ಲಿ..

ನನ್ನವಳ ನನ್ನವರು ನಾನಾದಾಗ..!

ನೀನೊಮ್ಮೆ ಸಿಕ್ಕಿಬಿಡು ತಾಳಿಕಟ್ಟಲು..
ಕಾಫಿ ಬಟ್ಟಲಿನಿಂದ ಮಗುವಿನ ಉಚ್ಚೆಯ
ತೊಟ್ಟಿಲ ತನಕ
ಎಲ್ಲವನ್ನೂ ತೊಳೆಯುತ್ತೇನೆ..!

ನನ್ನಪ್ಪನೂ ಹೀಗೇ ಹೇಳಿರಬೇಕು
ನನ್ನಮ್ಮನಿಗೆ..
ಈಗಲೂ ಕಾಫಿ ಬಟ್ಟಲ ಕೆಲಸ ನನ್ನಪ್ಪನದೇ..
ಬಚ್ಚಲೂ ಸೇರಿ..!

ಹಬ್ಬ ಪಾರ್ಟಿಗಳ ನಿನ್ನುದ್ದ ಬೆರಳಿಗೆ
ಗೋರಂಟಿ ಗೀರನ್ನು ಹಚ್ಚೆಯಂತೆ ಹಚ್ಚುತ್ತೇನೆ..
ವಕ್ರವಾದರೆ ಚೀರಬೇಡ..
ನಿನ್ನಂದದ ಮುಂಗುರುಳೂ ವಕ್ರವೇ..

ಹುಡುಗಿಯ ಮೊಬೈಲಿನಿಂದ
ಎಂದೋ ಒಂದೊಂದು ಮೆಸೇಜು ಬಂದರೆ
ರಾತ್ರಿ ಊಟ ಹಾಕದೇ ಇರಬೇಡ..
ಪಕ್ಕದ ಮನೆಯವನ ಪರಸ್ತ್ರೀ ನೀನು..
ನಿನ್ನ ಬಿಟ್ಟು ನಂಗೆಲ್ಲರೂ ತಂಗಿಯರೇ..!!

ಹಾಗೆಂದು..
ತವರಿಗೆ ಬಾ ತಂಗಿ ಎಂದಾಗ
ಊಟ ಬಿಟ್ಟು ಓಡಬೇಡ..
ಹಸಿದ ನಿನ್ನ ಮುಖ ನೋಡಿ
ವರದಕ್ಷಿಣೆ ಕಿರುಕುಳ ಎಂದುಕೊಂಡಾರು ನಿಮ್ಮಮ್ಮ..!

ಇವೆಲ್ಲ ಸಾಕು..
ನಂಗೊಂದು ಮಗು ಬೇಕು..!!
..........
(ಮಾತು ಮುಗಿದ ಸಮಯ..!).

ಹಾಯ್ಕುಗಳು :

* ರಾತ್ರಿ ಆ ಅಣೆಕಟ್ಟಿನ ಕಂಬದ ಬಿರಿದ ಗೀರು ದೊಡ್ಡದಾಗಿತ್ತು..
  ಮರುದಿನದ ಬಿಸಿಲನ್ನು ಸ್ವಾಗತಿಸಿದ್ದು ಅರ್ಧ ಮುಳುಗಿದ ಮಗು..!

* ಅಪಘಾತದಲ್ಲಿ ಕಾಲು ಹೋದ ನಂತರ ಸಿಕ್ಕಿದ ಮರಗಾಲನ್ನು
  ಸೊಲ್ಲಿಲ್ಲದೇ ತೊಟ್ಟುಕೊಂಡನಂತೆ ಅಪ್ಪಿಕೋ ಚಳುವಳಿ ಅಧ್ಯಕ್ಷ..!

* ಗಾಂಧೀಜಿಯ ಊಹೆ ನಿಜವಾಗಿತ್ತು.. ತನ್ನ ಕೊಂದವನು ನಾಥೂರಾಮನೆಂದು..
  "ಹೇ ರಾಮ್" ಎನ್ನುತ್ತಾ ಪ್ರಾಣ ಬಿಟ್ಟರು..!

* ನೀನೊಂದು ಬಾಯಿಗೆ ಸಂಬಂಧಿಸಿದ ರೋಗವಿರಬೇಕು..
  ಎಲ್ಲರ ಬಾಯಲ್ಲೂ ನಿನ್ನ ಹೆಸರೇ..!

* ಡಾವಿಂಚಿ ಗೆ Calcium ಕಡಿಮೆ ಇತ್ತೇನೋ..
  ಮೋನಾಲಿಸಾ ಗೆ ಹಲ್ಲುಗಳೇ ಇಲ್ಲ ಪಾಪ..!

ತೆರೆಮರೆಯ Talent ಗಳ ಭಕ್ತಿಗೀತೆ..!

ಕಿಟಕಿಯಾಚೆಯ ಕೋಗಿಲೆಗೇನು ಗೊತ್ತು
"ಈ ಸುಂದರ ಬೆಳದಿಂಗಳ" ಹಾಡು..?
ಕಲ್ಯಾಣರೊಮ್ಮೆ ಅಂದಿದ್ದ ನೆನಪು..
ಅಮೃತವೆಂದರೆ ಹಾಲು..
"ಅಮೃತ ವರ್ಷಿಣಿ" ಯೆಂದರೆ ಬಾಲು..!

ಜಯಂತ,ಸೂರಿ,ಯೋಗರಾಜರಿದ್ದರೂ
ಇನ್ಯಾರೋ ಬೇಕು ಕಾಲಕ್ಕೆ.. ಕಾಲ ಕಾಲಕ್ಕೆ.
ಗೀತಬ್ರಹ್ಮ,ಕಲಾಕುಸುಮ,ಸಾಹಿತ್ಯ ಸಿದ್ಧರಿದ್ದಲ್ಲಿ
ಮತ್ಯಾರೋ ಬಿದ್ದರು..
ಎತ್ತುವವರಿಲ್ಲದೇ ಅತ್ತರು..

ರಾಷ್ಟ್ರಭಾಷೆ ಕರುನಾಡಲ್ಲೂ ಸದ್ದು ಮಾಡಿತು..
ಬಂದವರಿಬ್ಬರೇ ಸುದ್ದಿ ಮಾಡಿದರು..
ಮುದ್ದು ಹಾಡುಗಳ ಒಡೆಯರಾಗಬೇಕಾದವರು
ಬಂದಿಬ್ಬರ ಗದ್ದಲದಲ್ಲಿ ಗೆದ್ದಲು ಹಿಡಿದರು..
ಕೊನೆಗವರ ಜಾಗ ಕಾಸರಗೋಡಿನ "ಮೌನ ಮಾತಾದಾಗ".

ರಸಿಕರೆಲ್ಲಾ ಕವಿಗಳು ಹೇಗಾದಾರು?
ಮತ್ತಿನಲ್ಲಿ ಗೀಚಿದ್ದೆಲ್ಲಾ ಕಾವ್ಯ ಹೇಗಾದೀತು?
ಯಾರೇನೇ ಅಂದರೂ..
ಕಿಟಕಿಯಾಚೆಯ ನಮ್ಮೀ ಕೋಗಿಲೆಗೆ ಗೊತ್ತು
ಹಳೆಪಾತ್ರೆ,ಪೌಡೆರ್ ಅತ್ತರಿನ ಭಾವರಹಿತ ಹಾಡು...

Sunday, January 15, 2012

'ಶೇಷ'ಕವನ

ಬಹುಷಃ ಇವೆಲ್ಲಾ ನಾವು,ನೀವು ಎಲ್ಲೋ ಒಂದು ಸಾರಿ ದಾಟಿ ಬಂದಿರುವಂಥದ್ದೇ.. ವಿಶೇಷವಿಲ್ಲದ, ಹೆಕ್ಕಬಹುದಾದ ನೆನಪುಗಳ 'ಶೇಷ'ಕವನ ಎನ್ನಬಹುದು ಇದನ್ನ....

ಓತಿಕ್ಯಾತಕ್ Torture ಕೊಟ್ಟೆ..
ಸಗಣಿ ಮುದ್ದೇಲ್ ಪಟಾಕಿ ಇಟ್ಟೆ..
ನೀರಲ್ ಬೋಂಡ ಬೇಯ್ಸಕ್ ಹೋದೆ..
ಹೇನು,ಜೇನು ಒಂದೇ ಅನ್ಕಂಡೆ..!

ಬಾಟ್ಲಿ ಕ್ಯಾಪಲ್ ಗಾಡಿ ಮಾಡ್ದೆ..
ವಾಸ್ನೆ ಸಾಕ್ಸಿಗ್ ಸೆಂಟ್ ಹೊಡ್ಕಂಡೆ..
ಹಲ್ಲಿ ಬಾಲ Cut Cut ಮಾಡ್ದೆ..
ನಲ್ಲಿ ನೀರು ಬಿಟ್ಟು ಓಡಿದ್ದೆ..

ಬುಕ್ಕಿನ್ ರಟ್ಟಲ್ ಕ್ರಿಕೆಟ್ ಆಡ್ದೆ..
ತಿಪ್ಪೆ ನಾಯಿಗ್ ಕಲ್ಲಲ್ ಹೊಡ್ದೆ..
ಸುರು ಸುರು ಕಡ್ಡಿ ಮರಕ್ಕೆ ಎಸ್ದೆ..
ರಾಮನ ವೇಷ್ದಲ್ ಹುಡುಗೀರ್ಗ್ ಕಣ್ ಹೊಡ್ದೆ..!

ತಪ್ಪಿ ಲೇಡೀಸ್ ಟಾಯ್ಲೆಟ್ಗೋದೆ..
ತಿರುಗೋ ಫ್ಯಾನಿಗ್ ಕೈ ಹಾಕ್ ನಿಲ್ಸ್ದೆ..
Friends ಹೇಳ್ಕೊಟ್ಟಿದ್ಕ್ ಅಪ್ಪಂಗ್ ಬೈದೆ..
ಕೋಲು,ವೈರು,ಬೆಲ್ಟಲ್ ಒದೆ ತಿಂದೆ..!

ಅಲ್ಲಿಗೆ ಬಾಲ್ಯ ಮುಗ್ದೇ ಹೋಯ್ತು..
ಕೆಲ್ಸ,ಹೆಂಡ್ತಿ, ಮಗುವೂ ಆಯ್ತು..
ಮಗನೂ ಹಂಗೇ ಮಾಡ್ತಿರ್ತಾನೆ..
ಹಳೆಯ ನೆನಪಿನ್ ವಾರಸ್ದಾರ ಹುಟ್ಟೇ ಬಿಟ್ನಲ್ಲ..!

Thursday, January 12, 2012

ವಿಶ್ವಕ್ಕೆ ಸ್ವಾಗತ..!!