About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Thursday, January 19, 2012

ಮರಳ ಗಾಳ

ದಿನವೂ ಮೀನು ಹಿಡಿಯಲು ಹೋಗುತ್ತಾರೆ ಅವರು..
ಸಂಸಾರಕ್ಕೆ ದೇವರಂತೆ,
ಮತ್ಸ್ಯಕುಲಕ್ಕೆ ದೆವ್ವದಂತೆ..
ಬೇರೆ ಬೇರೆ ಪಾತ್ರಗಳಿಗೆ ರಂಗವಿಲ್ಲದೇ,
ಮುಖವಾಡವಿಲ್ಲದೇ ಬಣ್ಣ ಹಚ್ಚುವ ಬೆವರ ಪುತ್ರರವರು..

ಸಾಗರವೆಂದರೆ ಸೋಜಿಗವಲ್ಲ ಅವರಿಗೆ..
ಬರೀ ನೀಲಿ,ಸೂರ್ಯನಿದ್ದರೆ ಕೊಂಚ ಕಿತ್ತಳೆ.
ಹಾಯಿಗಳ ಬಾಯಿಗೆ ಗಾಳಿಯ ಬೆಣ್ಣೆ ಮೆತ್ತಿಸುತ್ತಾ
ದಿನವೂ ಮೀನು ಹಿಡಿಯಲು ಹೋಗುತ್ತಾರೆ ಅವರು.

ಅಲೆಯಲ್ಲಾದರೂ ಹಾಕಿಸು
ಸುಳಿಯಲ್ಲಾದರೂ ಹಾಕಿಸು
ಮೀನು ಬೀಳುವ ಹಾಗೆ ಬಲೆ ಹಾಕಿಸು ರಾಘವೇಂದ್ರಾ..
ಎಂದು ದೇವರ ಬೇಡಿ,ಮರಳ ಗೋಪೀಚಂದನವ ತೀಡಿ
ಪ್ರತಿದಿನವೂ ಮೀನು ಹಿಡಿಯಲು ಹೋಗುತ್ತಾರೆ ಅವರು.

ಅದೊಂದು ದಿನ ಬಂದ ಡೊಡ್ಡಲೆಯ ಸುನಾಮಿ
ಬೇನಾಮಿ ಆಸ್ತಿಯಿಲ್ಲದ ಜನರ
ಗುಳೆ ಹೋಗಲೂ ಆಗದಂತೆ ನುಂಗಿಬಿಟ್ಟಿತು..
ಸಾಗರದಂಚು ಸ್ಮಶಾನವಾಯಿತು.
ದೇಹಗಳು ಕಡಲಮ್ಮನಿಗೆ ಹಾರವಾದವು..

ಸತ್ತವರಿಗೆ ಚಟ್ಟ ಕಟ್ಟುವವರೂ ಸತ್ತಪರಿ ಕಂಡು
ಮಮ್ಮಲ ಮರುಗಿತ್ತು ಮೊದಲಲ್ಲಿದ್ದ ಇಂದ್ರಪುರಿ..

ಅಳಿದುಳಿದವರು ಗಳಿಸಿದ್ದು ಕಳೆದು,
ರಾತ್ರಿ ಹಗಲಾಗಿ,
ಹಗಲು ರಾತ್ರಿಯಾದಂತೆ
ಮತ್ತೆ ಹಗಲಾದಾಗ
ಹೊಟ್ಟೆಗೊಂದಷ್ಟು ಹಿಟ್ಟಿಗೆ
ಅಂದೂ ಮೀನು ಹಿಡಿಯಲು ಹೋದರು ಅವರು..
ಅನಿವಾರ್ಯತೆಯ ಹುಟ್ಟು ಹಾಕುತ್ತಾ..

No comments:

Post a Comment