About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Wednesday, January 18, 2012

ವೃಕ್ಷ ಚರಿತ್ರ

ಮಳೆಹನಿಯೊಂದು ಫಕ್ಕನೆ
ಮಣ್ಣು ಚುಂಬಿಸಿತು..
ಒಳಗಿದ್ದ ಬೀಜ ಮಲಗಿದಲ್ಲೇ
ಮಗ್ಗಲು ಬದಲಿಸಿತು..

ಮರುದಿನದ ಬಿಸಿಲು ಹೊತ್ತು ತಂದಿದ್ದು
ಬೀಜದ ಮಗುವಿನಂಥ ಕುಡಿ..
ನಾಯಿ ಕೆರೆಯಲಿಲ್ಲ,
ಬೆಕ್ಕು ತೋಡಲಿಲ್ಲ..
ಗದ್ದೆಯ ಗಂಡಾಳಿನ ಕಾಲು ಅದೃಷ್ಟಕ್ಕೆ
ಪಕ್ಕದಲ್ಲೇ ಹಾದು ಹೋಯಿತು..

ಕುಡಿ ಗಿಡವಾಯಿತು..
ಸಿಕ್ಕಿದ್ದು ಹಕ್ಕಿ,ಜಾನುವಾರುಗಳ ಒಡಲ ವಾರಾನ್ನ..
ಬೆಳೆಯಿತು..
ಬೆಳೆದು ಯೌವ್ವನ ತಲುಪಿತು;
ಅಂದುಕೊಂಡಂತೆ ಬದುಕು ಸಾಗುತ್ತಿಲ್ಲವಲ್ಲಾ ಎಂಬ ಚಿಂತೆಯೊಂದಿಗೆ.

ಗಿಡದ ಹೆಸರು ಮರವಾಗಿ ಬದಲಾಯಿತು..
ಅನ್ನ ನೀಡಿದ್ದ ಹಕ್ಕಿಗಳಿಗೆ ಗೂಡು ನೀಡಿತು..
ಜಾನುವಾರುಗಳಿಗೆ ಅನ್ನವಾಯಿತು..
ಆದರೂ ಮತ್ತದೇ ಚಿಂತೆ.

ಅದೊಂದು ದಿನ ಆತ ಬಂದ..
ಆ ಮರದ ನೆರಳಿಗೆ ಮುಖ ಒಡ್ಡಿದ..
ಆಹಾ.. ಮನಸಿಗೆ ಎಂಥಾ ಶಾಂತಿ..
ಒಹ್ ಶಾಂತಿ..!! ಅದೇ..
ಅದೊಂದನ್ನೇ ಆತ ಜಗತ್ತಿಗೆ ಪರಿಚಯಿಸಿದ..
ಅವನು ಬುದ್ಧ..!

ಪರಿಣಾಮ..

ಮರದ ಹೆಸರು ಬೋಧಿಯಾಗಿ ಬದಲಾಯಿತು..
ಶಾಶ್ವತ ಶಾಂತಿಯ ಹರಿಕಾರನಾಯಿತು..
ಅಂದುಕೊಳ್ಳದ ರೀತಿಯಲ್ಲಿ ಬದುಕು ಬದಲಾಗಿಹೋಯಿತಲ್ಲಾ
ಎಂದುಕೊಳ್ಳುವಷ್ಟರಲ್ಲಿ..

ಫಕ್ಕನೆ ಮತ್ತೆಲ್ಲೋ ಹನಿಯೊಂದು
ಮಣ್ಣು ಚುಂಬಿಸಿತು..
ಭೂಮಿಯ ಅದೃಷ್ಟ ಕೈಕೊಟ್ಟ ಘಳಿಗೆ ಅದು..
ಮತ್ತೊಬ್ಬ ಬುದ್ಧ ಹುಟ್ಟಿಬರಲೇ ಇಲ್ಲ..
ಹುಟ್ಟಿಬರಲೇ ಇಲ್ಲ..

No comments:

Post a Comment