About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Saturday, October 27, 2012

ಉಳಿದೆಲ್ಲ ಮಾಯೆ..

ಮಾಧವನ ನಾದಕೆ
ಮುಂಗುರುಳ ಬಾಚದೇ
ಉಟ್ಟ ಬಟ್ಟೆಯ ತೊಟ್ಟು
ಹೊರಟಳಾ ಗೋಪಿಕೆ..

ಅಮ್ಮನಾ ನೆನಪಿಲ್ಲ
ಅಪ್ಪನಿಗೆ ಹೇಳಿಲ್ಲ
ಏನೊಂದು ತಿಳಿದಿಲ್ಲ
ಗೋಪಾಲನೊರತು..

ಮುಳ್ಳ ಮೊನಚಿಗೆ ಸಿಲುಕಿ
ಪಲ್ಲು ಸಿಗಿದರು ಕೂಡ
ಮೈ ನಿಲ್ಲಲಾರದು
ಮುಸುಕಿದಾ ಮಾಯೆಗೆ..

ಮುದ್ದು ಹರಿಣವು ಬೇಡ
ತುಂತುರಿನ ಮುದ ಬೇಡ
ಗೋವಿಂದನಂದಕ್ಕೆ
ಎಲ್ಲವೂ ಅಡ್ಡಿ..

ಆರ್ಭಟದ ವರುಣನೂ
ಸೋತು ಕಂಗಾಲಾಗಿ
ಹರಿದಿದ್ದ ಕಾಲ್ಕೆಳಗೆ
ತಿಳಿನೀರ ಥರದಲ್ಲಿ..

ನಿಂತ ಕೆರೆಯಲಿ ತೇಲಿ
ಹರಿವ ನದಿಯಲಿ ಹರಿದು
ಬಂದಳು ಹುಡುಕುತ್ತ
ಕೊಳಲಿನುಸಿರ..

ಅರೆರೆ..?!

ಶ್ಯಾಮನ ಸುಳಿವಿಲ್ಲ
ಎಲ್ಲಿ ಹೋದನೊ ಕಳ್ಳ
ದಿಕ್ಕು ದಿಕ್ಕಲಿ ಅಲೆದು
ಮರುಗಿದಳು ಕನ್ನಿಕೆ..

ಮೋಹನನ ರಾಗಕ್ಕೆ
ಮರಗಳಲು ಬೆವರಿತ್ತು
ಉಳಿದಿತ್ತು ಛಾಯೆ
ಉಳಿದೆಲ್ಲ ಮಾಯೆ..!

4 comments:

  1. ಕೃಷ್ಣ ಹಾಗೆಯೇ ಎಲ್ಲರಿಗೂ ಮುದ. ಚೆನ್ನಾಗಿದೆ.

    ReplyDelete
  2. ಮಾಧವನ ಮಾಯೆಯೇ ಅಂತದು. ಅದು ಗೋಪಿಕಾಪಹರಣ ಕ್ರಿಯೆ!

    ಗಟ್ಟಿ ಕವಿಯ ಚಂದದ ಕವನ.
    www.badari-poems.blogspot.com

    ReplyDelete
  3. Could Not Stop but say this, This is awesome!!

    ReplyDelete