About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Monday, April 2, 2012

ಕಲಹಕಾಂಡ

ಪಾಂಡವರ ವಧುದಕ್ಷಿಣೆ
ಭರ್ಜರಿ ಬ್ರಾಂಡುಗಳ ಐದು ಮೊಬೈಲುಗಳು..!
ಒಂಟಿಹೆಣ್ಣು ದ್ರೌಪದಮ್ಮನಿಗೆ ಕೈಗಳೆರಡೇ..
ನುಣುನಡುವಿಗೇರಿಸಿದ
ಸಂಚಿಯೊಳಗಿಳಿಬಿಟ್ಟಳಾ ಸೆಲ್ಲುಗಳ..!

ಹಸ್ತಿನಾವತಿಯ ವಿಹಾರವಾಯುವಿನಲ್ಲಿ
ಬಿಸಿವಿರಹದ ಸುಡು ಸುಡು..
ಒಬ್ಬರಿಗೊಬ್ಬರಿಗೆ ತಿಳಿಯದಂತೆ ಸೇರಬೇಕಾಗಿದೆ..!!
ವಾಕಿಂಗಿನ ಪಾಂಚಾಲಿಯಲ್ಲಿದ್ದಷ್ಟೂ ಫೋನುಗಳಿಗೆ
ಲೊಚಲೊಚನೆ ಬಂದವೈದು ಮೆಸೇಜುಗಳು...!

ಪರಮ ಪತಿಯಂದಿರವ್ರತೆಯಲ್ಲವೇ ಈಕೆ..!
ಚರಮದ ಬೇಗೆಯಲ್ಲಿ ಮೊದಲೆತ್ತಿದ್ದು
ಭೋಪರಾಕ್ ಧರ್ಮಜನ ಮೆಸೇಜು..
"ಅಪ್ರಿಯವಾದರೂ ಸತ್ಯವನ್ನೇ ಹೇಳುತ್ತೇನೆ..
ನಿನ್ನ ಇವತ್ತಿನ ಕೇಶಾಲಂಕಾರ ಚೆನ್ನಾಗಿರಲಿಲ್ಲ ಮಡದೀ.."
ಯಪ್ಪಾ..
"ಸತ್ಯದುವಾಚಗಳಿಗೆ
ಈ ಟೈಮಲ್ಲಾದ್ರೂ ರಜಾ ಕೊಡ್ರೀ ಧರ್ಮಪ್ನೋರೇ.. :("
ಮರುತ್ತರಿಸಿದಳು ಲೇವಡಿಯಲ್ಲಿ ಲೇಡಿ..!

ಆಸೆಯಿಂದಾಮೇಲೆ ನೋಡಿದಳು ಬಲಭೀಮನದ್ದು..
"ನಿನ್ನ ಗಲ್ಲ ಒಂದು ಕೇಜಿ ರಸಗುಲ್ಲ..!"
ಥತ್ತೇರಿಕೆ..
"ಕೇಜಿಗಳ ರೊಮ್ಯಾನ್ಸು ಹಿಡಿಂಬೆಗೇ ಸರಿ..
ರಣತೊಡೆಯ ಪ್ರತಾಪೀ,ಪಾಪೀ ಬಿಟ್ಬುಡಪ್ಪಾ ನನ್ನ.."

ಪಾರ್ಥನ ಫೋನಲ್ಲಾದರೂ
ಪಾಪು ಕೊಡುವ ಸೂಚನೆ ಇದ್ದೀತಾ?!
ಇಣುಕಿದಳು ದ್ರೌಪದಿ..
"ನಿನ್ನ ಹುಬ್ಬು ಬಿಲ್ಲು,ನಿನ್ನ ನೋಟ ಬಾಣ..
ಒಟ್ಟಿಗೇ ಸೇರಿದರೆ ಬಿಲ್ಲು-ಬಾಣ..!!"
ಅಯ್ಯೋ ವಿಧಿಯೇ..
"ನಿನ್ನೇ ನಂಬಿದ್ದೆ ಕಣೋ..
ಪಾಪು ಹೋಗಲಿ,
ಟೀ ಸ್ಪೂನು ಪ್ರೀತಿಯೂ ಇಲ್ಲವಲ್ಲೋ ಇಲ್ಲಿ ಅರ್ಜೂ.. :("

ಉಳಿದವರು : ಊರಿಗೊಂದಿದ್ದ ಝೆರಾಕ್ಸ್ ಅಂಗಡಿ ಹುಡುಗರು..!
ಒಬ್ಬರದೊಬ್ಬರ ನಕಲುಗಳು..
ನಕುಲ-ಸಹದೇವ..
ಮಿಕ್ಕಿದೊಂಚೂರು ಆಶಾಕಿರಣಕ್ಕೆ ಕಣ್ಣಗಲಿಸಿ
ಒಮ್ಮೆಲೇ ಓದಿದಳಾ ನಾರಿ
ಟ್ವಿನ್ನುಗಳಿಬ್ಬರ ಸಂದೇಶಗಳ......
"ಗುಡ್ ನೈಟ್ " - "ಸ್ವೀಟ್ ಡ್ರೀಮ್ಸ್"..!!

ಪುತ್ರಿಪ್ರಾಪ್ತಿಯ ಸೊರಗಿದ ಕನಸಿನೊಂದಿಗೆ
ವೃಷಭರಾಶಿಯ ಕುಂಡಲಿ ಕುಮಾರ
ಕರ್ಣ ನೆನಪಾಗಿ
ಬೆಳ್ಳಂಬೆಳಗಿನ ದುರ್ಗಾಂಬಾ ಬಸ್ಸಿಗೆ
ಊರುಬಿಟ್ಟಳು ಮುಡಿಯದ ಹೂ ದ್ರೌಪದಿ..!

ಈ ಕಾರಣವಾಗಿ, ಮದುವೆಯಾದ ಒಂದು ಮಾಸದೊಳಗೇ ಡೈವೋರ್ಸಿನವರೆಗೆ ಹೋಗಿದ್ದ ದ್ರೌಪದೀ-ಪಾಂಡವರ ಈ "ಕಲಹಕಾಂಡ", ಮಹಾಭಾರತ ಕಾವ್ಯದಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ..! ಬಹುಷಃ ಈ ಮೂಲಕ  ಪತ್ರಿಕಾ ಸ್ವಾತಂತ್ರ್ಯದ ಮೇಲೆ ಮನುಕುಲದ ಮೊದಲ ಹಲ್ಲೆಯಾಗಿದ್ದು ಪಾಂಡವರಿಂದ ವ್ಯಾಸರ ಮೇಲೆ ಎನ್ನಬಹುದು..!! :):)

2 comments:

  1. Ha ha :)
    ವಿಷಯ ಕಟು ಇದೆ.. ಅದೇನೇ ಇರಲಿ.. black and white ಸಿರಿಯಲ್ ಗೆ color ಹಚ್ಚಿದ್ದು ಚೆನ್ನಾಗಿದೆ..

    ReplyDelete
  2. ಚೆನ್ನಾಗಿದೆ ವಿಶ್ವ, ಕೆಲವೊಮ್ಮೆ ಬರೆಯುವುದನ್ನ ನಿಲ್ಲಿಸಲಾಗುವುದಿಲ್ಲ.. ಹೀಗೇ ಬರೀತಾ ಇರು .

    ReplyDelete