About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Monday, November 4, 2013

Diwali - ದೀಪಾವಳಿ

ನನ್ನ ಮಡಿಲ ಸೆರೆಯ ಬಿಡಿಸಿ
ತನ್ನ ತಾವರೆಯೂರಿಗೆ ಓಡಿಹೋದಳು
ಲಕ್ಷ್ಮಿ..
ಕಾಕರಾಜನ ಬೆನ್ನೇರಿ ಬೇಟೆಯಾಡುವವನ
ವಾರೆಗಣ್ಣೇಕೋ ಅದೇ ಸಮಯಕ್ಕೆ
ನನ್ನ ಜೇಬಿನ ಬೇಲೆ ಬಿದ್ದಿದ್ಯಾಕೆ..??!

ಅಲ್ಲಿಗೆ ಶುರುವಾಯ್ತು ಕಷ್ಟಗಳ One-sided ತುಲಾಭಾರ....

Paste ಖಾಲಿ..
ಮನೆಯಲ್ಲಿನ ಗ್ಯಾಸ್ ಖಾಲಿ..
ಹಬ್ಬದ ಸಂಭ್ರಮಕ್ಕೆ ಹೋಟೆಲ್ ಮುಂಗಟ್ಟುಗಳು ಬಂದ್..
ಸಾಲಕೊಟ್ಟವನ ಬೈಕು ಮನೆಮುಂದೆ ಹಾಕಿದ ಸೈಡ್ ಸ್ಟ್ಯಾಂಡ್ ಸದ್ದು..
ನೀರಿನ ಕ್ಯಾನಿಗೆ ಫೋನಾಯಿಸಿದರೆ ಬ್ಯಾಲೆನ್ಸ್ ನಿಲ್ ಎಂದುಲಿಯುವ ಕಟುಕಂಠದ ಲಲನೆ,
ರೂಮ್ ಮೇಟು ಊರುಸೇರಿದ್ದ,
ಬಿಸ್ಕೆಟ್ಟಿಗೆ ಕಾಸಿದ್ದರೂ ಮೂಲೆಯಂಗಡಿಯಲ್ಲಿ ದೊರೆತಿದ್ದು ಬೀಗ ಮಾತ್ರ..
ಅಯ್ಯೋ.. ಇದೇನು.. ಕರೆಂಟ್ ಹೋಯ್ತು...!

ದೀಪದ ಹಬ್ಬವಿದು -
-ನೆಂಟರೆನಿಸಿಕೊಂಡವರು ನೂರು.. ಮನೆಗೆ ಊಟಕ್ಕೆ ಕರೆಯದವರೇ ಎಲ್ಲರೂ..

ಒಂಟಿಯಾಗಿಹೋದೆ ಕೊನೆಗೂ..

ಹುಚ್ಚೊಂದು ತಂತಾನೇ ಮೆತ್ತಿಕೊಳ್ಳುವ ಮುನ್ನ ಹಲ್ಲು ಕಚ್ಚಿ ಎದ್ದು ನಿಂತೆ....
ಬರೀ ಬ್ರಶ್ಶಿಂದ ಹಲ್ಲುಜ್ಜಿದೆ..
ಗ್ಯಾಸ್ ಖಾಲಿಯಾದರೇನಂತೆ.. ಮೂರುದಿನದ ಹಿಂದೆ ಕೊಂಡ ಕ್ಯಾರೆಟ್ ತಿಂದೆ..
ಮಧ್ಯಾಹ್ನಕ್ಕೆರಡು ಪ್ಯಾಕ್ Eno..
ಸಾಲಕೊಟ್ಟವನಿಗೆ ನಾನೇ ಟೈಮು ಕೊಟ್ಟೆ..
ನಲ್ಲಿ ನೀರು ಕುಡಿದೆ..
ಕರೆಂಟಿಲ್ಲದಿರೆ ಪುಸ್ತಕಕ್ಕೆ ಬರವೇ..! ಗುಕ್ಕಿನಲ್ಲಿ ಮುಗಿಸಿದೆ ಮೂರ್ಪುಸ್ತಕಗಳ..
ನೆಂಟರ ಹಂಗು,ಹಮ್ಮುಗಳ್ಯಾಕೆ.. ಗಂಡಸಲ್ಲವೇ ನಾನು..!
ಬದುಕಿಬಿಡುತ್ತೇನೆ ಒಬ್ಬನೇ.. -
-ಮಕ್ಳಾ.. ಮುಂದೊಂದಿನ ಗಾಂಧೀಜಯಂತಿಗೂ ಮನೆಗೆ ಕರೀತೀರಿ ನನ್ನ.. ನೋಡ್ತಿರಿ..
ಎಂದುಕೊಂಡು..
ಕಸದ ಮಧ್ಯೆ ಸಿಕ್ಕ ಅರ್ಧ ಸಿಗರೇಟಿಗೆ ಕೆಂಪಂಟಿಸಿ
ಟೆರೇಸಿಗೆ ಬಂದರೆ...

...........................

ಭೂಚಕ್ರ,ಕುಂಡಗಳ ಮುಂಡಗಳಿಗೆ ಕಿಡಿಬತ್ತಿಗಳ ಚುರುಕುಮುಟ್ಟಿಸಿ
ಮನದ ಮೂಲೆಮೂಲೆಗಳಿಗೆ ಖುಷಿಯ ಬಣ್ಣ ಬಳಿದುಕೊಂಡ ಪಾಪುಗಳೂ..,
ಝರಿಸೀರೆಯ ಹೋಮ್ಲಿ ಅಮ್ಮಂದಿರೂ,
ಬರ್ಮುಡಾ ತೊಟ್ಟು ಡಿಜಿಕ್ಯಾಮ್ ಹಿಡಿದುನಿಂತ ಅಪ್ಪಂದಿರೂ,
ಊರ್ತುಂಬ ಅಲ್ಲಲ್ಲಲ್ಲಿ ಘೀಳಿಡುವ ಮಿನಿಬಾಂಬುಗಳು
ಹಾಗೂ..
ಟೆರೇಸಿನಲ್ಲಿ ಕೈಕಟ್ಟಿನಿಂತ ಸ್ನಾನ ಮಾಡದ ನಾನು...

ಹೌದು..

ಬದುಕಿಬಿಡಬೇಕು ನಾನು..
ಶನಿಲಕ್ಷ್ಮಿಯರ ಚುರುಕುಮುಟ್ಟಿಸಿಕೊಂಡಲ್ಲಿ ಮಾತ್ರ
ಕಿರಣಗಳ ಸೂಸಿ ತಿರುಗಲು ಸಾಧ್ಯ..
ಕಿಡಿಗಳ ಚಿಮ್ಮಿಸಿ ಭೋರ್ಗರೆಯಲು ಸಾಧ್ಯ..
ಬೆಳಕಾಗಲು ಸಾಧ್ಯ..
ಬದಲಾಗಲು ಸಾಧ್ಯ..
ಸಾಧ್ಯತೆಗಳ ಎದುರುಗೊಳ್ಳಲು ಸಾಧ್ಯ..
ಉರಿ,ಗುರಿ,ಗರಿ.. ಇದಲ್ಲವೇ ಹೈಯರಾರ್ಕಿ..?!!

ಬೋಧಿಯಿಲ್ಲದ ಟೆರೇಸಿನಲ್ಲಿ ಜ್ನಾನೋದಯವಾಗಿ
ಮೆಟ್ಟಿಲಿಳಿದ್ಹು ರೂಮಿನ ಕದ ತೆರೆದದ್ದಷ್ಟೇ..
ಕರೆಂಟು ಬಂತು......!!!

ನನ್ನ Diwali ದೇಹದೊಳಗೊಂದು
ಸ್ಪಷ್ಟ ದೀಪಾವಳಿ ಶುರುವಾಗಿದ್ದು ಹೀಗೆ....

1 comment:

  1. ಬಹಳ ಸುಂದರ ಕವನ. ಎಷ್ಟು ಸರಳವಾಗಿ ''ದುರಿತಭರಿತ ಭವಪಂಜರ'' ಸೆರೆಮನೆಯ ಶಿಕ್ಷಾತಂತ್ರಗಳ ಚಿತ್ರಣವಿದೆ. ಕಣ್ಣಿಗೆ ಕಟ್ಟಿದಂತೆ ವರ್ಣಿಸಿದ್ದಾರೆ......ಬಹುಶಃ ಅನುಭವಸಾರವೇ ಇರಬೇಕು....! ವಿಶೇಷವಾಗಿ, 'ತಾವರೆಯೂರು', 'ಊಟಕ್ಕೆ ಕರೆಯದವರು', 'ಕರೆಂಟಿಲ್ಲದಿರೆ ಪುಸ್ತಕಕೆ ಬರವೇ' -ಮನಸೆಳೆಯುತ್ತವೆ. ಅಂತ್ಯ ಅಭಿನಂದನಾರ್ಹ, ಧೀರ ಆಶಾದಾಯಕ. ಉಘೇ...ಉಘೇ.

    ReplyDelete